ಬೆಳ್ತಂಗಡಿ: ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ನಿವೃತ್ತ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಅವರಿಗೆ ನುಡಿ ನಮನ ಕಾರ್ಯಕ್ರಮ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆಯಾಗಿದ್ದ ಯಶೋವರ್ಮ ಅವರು ಉಜಿರೆಯ ಹಲವು ಅಭಿವೃದ್ಧಿ ಕೆಲಸಗಳಿಗೆ ಮಾರ್ಗದರ್ಶಕರಾಗಿದ್ದರು. ಅವರ ಅಪಾರಜ್ಞಾನ,ಆಸಕ್ತಿ ವಿಶಿಷ್ಟವಾದುದು. ಅವರು ತಮ್ಮ ಕಲ್ಪನೆ, ಯೋಜನೆಗಳನ್ನು ಸರಳವಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಪ್ರಾಶಸ್ಯ ನೀಡುತ್ತಿದ್ದರು. ಇನ್ನೊಬ್ಬರಿಗೆ ನೋವು ನೀಡದ ಪ್ರೀತಿಯ ವ್ಯಕ್ತಿತ್ವ ಹೊಂದಿದ್ದ ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ನುಡಿನಮನ ಸಲ್ಲಿಸಿದರು.
ಧರ್ಮಸ್ಥಳದ ಶ್ರದ್ಧಾ ಅಮಿತ್ ಮಾತನಾಡಿ ಕಷ್ಟ-ಸುಖ, ಹೊಂದಾಣಿಕೆಯ ಪಾಠ ಹೇಳಿಕೊಡುತ್ತಿದ್ದ ಅವರು ಸ್ಥಿತಪ್ರಜ್ಞರಾಗಿದ್ದರು. ಇತರರಿಗೂ ಅವಕಾಶ ಕೊಡುವ ಅವರ ವ್ಯಕ್ತಿತ್ವ ಕಾರ್ಯಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಭವಿಷ್ಯದ ಯೋಜನೆಗಳಿಗೆ ಪೂರಕವಾಗಿತ್ತು ಎಂದು ಹೇಳಿದರು. ಪುತ್ರ ಪೂರನ್ ವರ್ಮ, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ನುಡಿನಮನ ಸಲ್ಲಿಸಿದರು. ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಕೆಯ್ಯರ್ ವರ್ಮ,ಮೂಡುಬಿದ್ರೆ 18 ಬಸದಿ ಮೊತ್ತೇಸರ ದಿನೇಶ್ ಆನಡ್ಕ,ಸಹೋದರಿ ಪ್ರಿಯದರ್ಶಿನಿ,ಸಹೋದರ ಸುಧೀಶ್,ವೈಶಾಲಿ, ಮಾಜಿ ಸಚಿವ ರಮಾನಾಥ ರೈ ಇನ್ನಿತರ ಗಣ್ಯರು ಉಪಸ್ಥಿತರಿದ್ರು.
ಮೃತರ ಆತ್ಮಶಾಂತಿ ಗಾಗಿ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು. ಬಳಿಕ ಸಾರ್ವಜನಿಕ ಸಮಾರಾಧನೆ ಜರುಗಿತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವಿದ್ಯಾರ್ಥಿಗಳು, ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಉಜಿರೆಯ ವರ್ತಕರು ಹಾಗೂ ನಾಗರಿಕರು ಸಹಕರಿಸಿದರು.