ಬೆಂಗಳೂರು : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿರುವುದು ಅತ್ಯುತ್ತಮ ಆಯ್ಕೆ. ಇದು ರಾಜ್ಯಕ್ಕೆ ಸಂದ ಅತಿದೊಡ್ಡ ಗೌರವ ಎಂದು ಕನ್ನಡ- ಸಂಸ್ಕ್ರತಿ ಮತ್ತು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.
ರಾಜ್ಯವನ್ನು ಧಾರ್ಮಿಕ ಕ್ಷೇತ್ರದಲ್ಲಿ ಮುನ್ನಡೆಸುವುದರ ಜತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ವೀರೇಂದ್ರ ಹೆಗ್ಗಡೆಯವರು ಅವಿರತ ಶ್ರಮಿಸಿದ್ದಾರೆ. ಅವರ ಕನಸಿನ ಫಲವಾಗಿ ರಾಜ್ಯಾದ್ಯಂತ ಬೆಳೆದಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗ್ರಾಮೀಣ ಭಾಗದ ಜನರ ನಂದಾದೀಪವಾಗಿದೆ. ಸುಮಾರು 50 ಲಕ್ಷದಷ್ಟು ಜನರು ಈ ಸಂಸ್ಥೆಯ ಸದಸ್ಯರಾಗಿರುವುದು ಸಣ್ಣ ಮಾತಲ್ಲ. ಅದೇ ರೀತಿ ವಿದ್ಯಾಕ್ಷೇತ್ರದಲ್ಲೂ ಹೆಗ್ಗಡೆ ಯವರ ಸಾಧನೆ ಅನನ್ಯ. ಈ ಎಲ್ಲ ಕಾರಣಕ್ಕಾಗಿ ಕೇಂದ್ರ ಸರಕಾರ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿರುವುದು ಅತ್ಯಂತ ಅಭಿನಂದನೀಯ ಎಂದಿದ್ದಾರೆ.
ರಾಜ್ಯಸಭೆಗೆ ನಾಮನಿರ್ದೇಶನಗೊಂಡ ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಅವರಂಥ ಶ್ರೇಷ್ಠ ವ್ಯಕ್ತಿತ್ವವನ್ನು ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಹೆಗ್ಗಡೆಯವರ ಮಾರ್ಗದರ್ಶನ ಸದಾ ನಮಗಿರಲಿ ಎಂದು ತಿಳಿಸಿದ್ದಾರೆ.