ಉಳ್ಳಾಲ: ಬೇಕಾಬಿಟ್ಟಿ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ ದಂಪತಿಗೆ ನೆರೆಮನೆಯ ನಾಲ್ವರು ಸೇರಿ ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದ ಹೊಯ್ಗೆ ಎಂಬಲ್ಲಿ ನಡೆದಿದೆ.
ಉಳ್ಳಾಲ ಹೊಯ್ಗೆ ನಿವಾಸಿಗಳಾದ ಸ್ಟೀವನ್ ಡಿಸೋಜ(40) ಹಾಗೂ ಪತ್ನಿ ವೀಣಾ ಡಿಸೋಜ (30) ಹಲ್ಲೆಗೊಳಗಾದವರು. ಇವರ ಮೇಲೆ ನೆರೆಮನೆಯವರಾದ ಪ್ರಕಾಶ್ ಡಿಸೋಜ, ಮಧುಜೀವನ್ ಡಿಸೋಜ ಆತನ ಪತ್ನಿ ಕೀರ್ತಿ ಡಿಸೋಜ ಹಾಗೂ ಚೇತನ್ ಡಿಸೋಜ ಹಲ್ಲೆ ನಡೆಸಿದದ್ದಾರೆ ಎನ್ನಲಾಗಿದೆ.
ತೊಕ್ಕೊಟ್ಟು ಚಚ್೯ನಿಂದ ಮನೆಗೆ ವಾಪಸ್ಸಾಗುತ್ತಿದ್ದ ದಂಪತಿ ನಡೆದುಕೊಂಡು ಬರುವ ಸಂದರ್ಭ ನೆರೆಮನೆಯವರು ಕಾರನ್ನು ಎರ್ರಾಬಿರ್ರಿಯಾಗಿ ಚಲಾಯಿಸಿದ್ದಾರೆ. ಈ ವೇಳೆ ಸ್ಟೀವನ್ ಡಿಸೋಜ ದಂಪತಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಅಲ್ಲದೇ ಆ ರೀತಿ ಕಾರು ಚಲಾಯಿಸಿದ್ದು ಯಾಕೆ ಅಂತಾ ಸ್ಟೀವನ್ ಅವರು ನೆರೆಮನೆಗೆ ತೆರಳಿ ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ನೆರೆಮನೆಯವರು ಅಕ್ರಮವಾಗಿ ಸ್ಟೀವನ್ ಅವರ ಮನೆಯೊಳಗೆ ಪ್ರವೇಶಿಸಿ ದಂಪತಿಗೆ ಕಟ್ಟಿಗೆಯಿಂದ ತಲೆ, ಕಾಲು, ಬೆನ್ನು, ಸೊಂಟದ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಉಳ್ಳಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ