ಹೆಬ್ರಿ: ಕಳೆದ ಕೆಲವು ದಿನಗಳ ಹಿಂದೆ ಪೀತುಬೈಲ್ ಎಂಬಲ್ಲಿ ನಡೆದ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದ ನಿವಾಸಿ ಜಯಂತ್ ಗೌಡ ಅವರನ್ನು ತನಿಖೆಯ ಸಲುವಾಗಿ ಹೆಬ್ರಿ ಪೊಲೀಸರು ವಿಚಾರಣೆಗೆ ವಶಪಡಿಸಿಕೊಂಡಿದ್ದಾರೆ. ಪೊಲೀಸರ ಈ ನಡೆಯನ್ನು ವಿರೋಧಿಸಿದ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನ. 22 ಶುಕ್ರವಾರದಂದು ನಡೆದಿದೆ.
ಎನ್ ಕೌಂಟರ್ ನಡೆದ ಸ್ಥಳಕ್ಕೆ ಭೇಟಿ ನೀಡಿದ ಹೆಬ್ರಿ ಪೊಲೀಸರು ನಂತರದಲ್ಲಿ ಜಯಂತ್ ಗೌಡ ಅವರನ್ನು ವಶಪಡಿಸಿಕೊಂಡು ಹೆಬ್ರಿ ಠಾಣೆಗೆ ಕರೆ ತಂದಿದ್ದಾರೆ.
ಇನ್ನು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಲೆಕುಡಿಯ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು, ‘ಜಯಂತ್ ಗೌಡ ಅಮಾಯಕನಾಗಿದ್ದು, ಆತನಿಗೆ ಏನು ತಿಳಿದಿಲ್ಲ. ಅಂತವನನ್ನು ಯಾಕೆ ಠಾಣೆಗೆ ಕರೆದುಕೊಂಡು ಬಂದಿದ್ದೀರಿ, ಅಲ್ಲಿಯ ವಿಚಾರಿಸಬಹುದಿತ್ತಲ್ಲ,’ ಎಂದಿದ್ದಾರೆ. ನಂತರದಲ್ಲಿ ಠಾಣಾಧಿಕಾರಿ ಅವರಲ್ಲಿ ಮನವಿ ಮಾಡಿ ಆತನನ್ನು ಕೂಡಲೇ ಬಿಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಅಷ್ಟೇಅಲ್ಲದೆ ಆತನನ್ನು ಬಿಡುವ ತನಕ ನಾವು ಠಾಣೆಯಿಂದ ಕದಲುವುದಿಲ್ಲ ಎಂದು ಗ್ರಾಮಸ್ಥರು ಠಾಣೆ ಎದುರು ಜಮಾಸಿದ್ದಾರೆ.
ಠಾಣಾಧಿಕಾರಿ ಮಹೇಶ್ ಟಿ. ಈ ಕುರಿತಂತೆ ಪ್ರತಿಕ್ರಿಸಿ ಮೇಲಾಧಿಕಾರಿಗಳಲ್ಲಿ ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಶ್ರೀಧರ್ ಗೌಡ, ಗಂಗಾಧರ ಗೌಡ, ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ್ ಬಂಗೇರ, ಊರಿನ ಪ್ರಮುಖರಾದ ವಿಜಯ ಶೆಟ್ಟಿ ಉಪಸ್ಥಿತರಿದ್ದರು.