ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಗಳನ್ನು ದಾಖಲಿಸಲಾಗುತ್ತಿದ್ದು,
ಹಿಂದೂ ಕಾರ್ಯಕರ್ತರ ಮೇಲೆ ಕೂಡಾ ಕೇಸ್ ಹಾಕಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ನಳೀನ್ ಕುಮಾರ್ ಕಟೀಲ್, ಜನಪ್ರತಿನಿಧಿಗಳ ಮೇಲೆ ಕೂಡಾ ಕೇಸ್ ಹಾಕಿ ಅವರ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಪರ ಧ್ವನಿ ಎತ್ತಿದ ಶಾಸಕರ ಮೇಲೆ ಕೇಸ್ ಹಾಕಲಾಗಿದ್ದು, ಪೊಲೀಸ್ ಇಲಾಖೆಯ ಮೂಲಕ ಸರ್ಕಾರ ಎಫ್ ಐ ಆರ್ ದಾಖಲಿಸಿದೆ ಎಂದು ನಳೀನ್ ಕುಮಾರ್ ಕಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಹರೀಶ್ ಪೂಂಜಾ ಮೇಲೆ ಒಂದೇ ತಿಂಗಳಿನಲ್ಲಿ ಎರಡನೇ ಎಫ್ಐ ಆರ್ ದಾಖಲಿಸಲಾಗಿದ್ದು, ಸಿಎಂ ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ಭಕ್ತರ ಮೇಲೆ ಕೇಸ್ ಗಳನ್ನು ದಾಖಲಿಸುತ್ತಿರುವುದು ಹೆಚ್ಚಾಗುತ್ತಿದ್ದು, ರಾಷ್ಟ್ರ ವಿರೋಧಿಗಳ ಮೇಲೆ ಒಂದೂ ಕೇಸ್ ದಾಖಲಾಗುತ್ತಿಲ್ಲ ಎಂದು ಕಟೀಲ್ ಟೀಕಿಸಿದ್ದಾರೆ.