ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 10 ಲಕ್ಷ ಸಿಬ್ಬಂದಿ ನೇಮಕಾತಿ ಅಭಿಯಾನಕ್ಕೆ ರೋಜ್ಗಾರ್ ಮೇಳಕ್ಕೆ ಚಾಲನೆ ನೀಡಿದ್ದು, ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕಟೀಲ್, ಹೊಸದಾಗಿ ಸೇರ್ಪಡೆಗೊಂಡ 75,000 ಮಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದೊಂದು ಮಹತ್ವದ ಉಪಕ್ರಮವಾಗಿದೆ. ಈ ಮೂಲಕ ನಿರುದ್ಯೋಗ ನಿವಾರಣೆಯ ಕನಸು ನನಸಾಗಲಿದೆ. ಇದಕ್ಕಾಗಿ ಅವರಿಗೆ ರಾಜ್ಯ ಬಿಜೆಪಿ ವತಿಯಿಂದ ಪ್ರಧಾನಿಯವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿಯವರು ಈ ಕಾರ್ಯಕ್ರಮ ಕೈಗೊಂಡಿದ್ದು, 75 ಸಾವಿರ ಯುವಕರಿಗೆ ಉದ್ಯೋಗ ಲಭಿಸಿದೆ. ಬಿಜೆಪಿ ಆಡಳಿತವುಳ್ಳ ವಿವಿಧ ರಾಜ್ಯಗಳಲ್ಲೂ ಇಂಥ ಉದ್ಯೋಗ ಮೇಳ ನಡೆಯಲಿದೆ. ಇದರಿಂದ ಯುವ ಸಮೂಹದ ಉದ್ಯೋಗದ ಆಶಯ ಈಡೇರಲಿದೆ ಎಂದು ಕಟೀಲ್ ಹೇಳಿದ್ದಾರೆ.
ಅಲ್ಲದೇ ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರವಾಗಿ ಮಾಡುವ ಕನಸು ಇದರಿಂದ ನನಸಾಗಲಿದೆ. ಉದ್ಯಮಿಗಳು, ಕೈಗಾರಿಕೆದಾರರು ಸೇರಿ ಎಲ್ಲರೂ ಈ ಕಾರ್ಯದಲ್ಲಿ ತಮ್ಮ ಸಹಾಯಹಸ್ತ ಚಾಚಲಿದ್ದಾರೆ. ಇದು ದೇಶದ ‘ಅಮೃತ ಕಾಲ’. ಎಲ್ಲರ ಪ್ರಯತ್ನದಿಂದ (ಸಬ್ಕಾ ಪ್ರಯಾಸ್) ಇದು ಈಡೇರುವ ಆಶಯ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಅವರದು ಎಂದು ನಳೀನ್ ಕುಮಾರ್ ಕಟೀಲ್ ಮೆಚ್ಚುಗೆ ಸೂಚಿಸಿದ್ದಾರೆ.