ಮಂಗಳೂರು; ಸರ್ಕಾರ 50 ವರ್ಷ ಮೇಲ್ಪಟ್ಟ ದೈವ ನರ್ತಕರಿಗೂ ಮಾಸಾಶನ ನೀಡಬೇಕು ಎಂದು ದೈವರಾಧಕರ ಸೇವಾ ಸಮಾಜದ ನಿಕಟ ಪೂರ್ವ ಅಧ್ಯಕ್ಷ ದಯಾನಂದ ಕತ್ತಲ ಸಾರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೈವನರ್ತಕರಿಗೆ ಮಾಸಾಶನ ಪ್ರಕಟಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ದೈವ ನರ್ತಕರು ಹಗಲು ರಾತ್ರಿಯೆನ್ನದೇ ದಿನದಲ್ಲಿ ಸತತ 16 ಗಂಟೆವರೆಗೂ ಸತತ ದೈವಾರಾಧನೆಯಲ್ಲಿ ತೊಡಗುತ್ತಾರೆ. ಸರ್ಕಾರ 60 ವರ್ಷ ಮೀರಿದ ದೈವ ನರ್ತಕರಿಗೆ ಮಾಸಾಶನ ಘೋಷಿಸಿದೆ. ಆದರೆ 60 ವರ್ಷದ ಬಳಿಕ ಮಾಸಾಶನ ಸಿಕ್ಕಿದರೆ, ಅದನ್ನು ಅನುಭವಿಸುವುದಕ್ಕೆ ಅವರಿಗೆ ಪ್ರಾಯ ಇರುವುದಿಲ್ಲ. ಹಾಗಾಗಿ 50 ವರ್ಷ ಮೇಲ್ಪಟ್ಟ ದೈವ ನರ್ತಕರಿಗೂ ಮಾಸಾಶನ ನೀಡಬೇಕು ಎಂದಿದ್ದಾರೆ.
ಇನ್ನು ದೈವದ ಕೋಲ ಕಟ್ಟುವವರು ಮಾತ್ರ ದೈವಗಳ ಸೇವೆ ಮಾಡುವುದಲ್ಲ. ದರ್ಶನ ಪಾತ್ರಿಗಳು, ದೀವಟಿಕೆಯವರು, ವಾಲಗದವರು ಸೇರಿದಂತೆ ಇತರ 16 ಚಾಕರಿ ವರ್ಗಗಳಲ್ಲೂ ಶೋಷಿತರು ಇದ್ದಾರೆ. ಅವರಿಗೂ ಈ ಮಾಸಾಶನ ಸೌಲಭ್ಯ ವಿಸ್ತರಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.