ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಕಾಸರಗೋಡಿನ ಕೆ.ವಿ. ಅಶ್ವಿನ್ (24) ಎಂಬ ಯೋಧ ಹುತಾತ್ಮರಾಗಿದ್ದಾರೆ. ಎಚ್ಎಎಲ್ ನಿರ್ಮಿತ ರುದ್ರ (ALH-WSI) ಎಂಬ ಸುಧಾರಿತ ಕಾಪ್ಟರ್ ನಿನ್ನೆ ಪತನಗೊಂಡು ನಾಲ್ವರು ಹುತಾತ್ಮರಾಗಿದ್ದರು. ಹೆಲಿಕಾಪ್ಟರ್ನಲ್ಲಿ ಒಟ್ಟು ಐದು ಜನರಿದ್ದರು.
ಕಾಸರಗೋಡಿನ ಚೆರ್ವತತೂರು ಕಾಟುವಳಪ್ಪಿನ ಅಶೋಕನ್ ಮತ್ತು ಕೆ.ವಿ. ಕೌಶಲ್ಯ ದಂಪತಿ ಪುತ್ರ ಕೆ.ವಿ. ಅಶ್ವಿನ್ ಹೆಲಿಕಾಪ್ಟರ್ ಪತನದಲ್ಲಿ ಹುತಾತ್ಮರಾಗಿದ್ದಾರೆ. ಈ ಕುರಿತು ಸೇನಾ ಅಧಿಕಾರಿಗಳು ಅಶ್ವಿನ್ ಅವರ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಮನೆಯಲ್ಲಿ ಶೋಕ ಮಡುಗಟ್ಟಿದೆ. ಅಶ್ವಿನ್ ಅವರು ಸೇನೆಗೆ ಸೇರಿ ನಾಲ್ಕು ವರ್ಷಗಳಾಗಿದೆಯಷ್ಟೇ. ಇವರು ಎಲೆಕ್ಟ್ರಾನಿಕ್ ಆಂಡ್ ಮೆಕಾನಿಕಲ್ ವಿಭಾಗದಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದರು. ಇತ್ತೀಚಿಗೆ ಇವರು ರಜೆಯಲ್ಲಿ ಮನೆಗೂ ಬಂದಿದ್ದರು.
ಅಶ್ವಿನಿ ಹುತಾತ್ಮರಾಗಿರುವ ಸುದ್ದಿಯನ್ನು ಸೇನೆ ಖಚಿತಪಡಿಸಿದ ಬಳಿಕ ಇವರ ಕುಟುಂಬ ಮತ್ತು ಸ್ನೇಹಿತರು ಆಘಾತಕ್ಕೆ ಒಳಗಾಗಿದ್ದಾರೆ. ಅವರ ಪಾರ್ಥೀವ ಶರೀರ ನಾಳೆಯೇ ಕಾಸರಗೋಡು ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಇದನ್ನು ಜಿಲ್ಲಾಡಳಿತ ಖಚಿತಪಡಿಸಿಲ್ಲ.