ಚಿಕ್ಕಮಗಳೂರು: ದತ್ತಪೀಠದಲ್ಲಿ ನ.7 ರಿಂದ 13 ರವರೆಗೆ ದತ್ತಮಾಲ ಅಭಿಯಾನ ನಡೆಯಲಿದೆ. ಈ ಬಗ್ಗೆ ಬ್ಯಾನರ್, ಬಂಟಿಂಗ್ಸ್ ಗಳನ್ನು ಅಳವಡಿಸುವಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದ್ದಾರೆ.
ದತ್ತಮಾಲ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ.10ರಂದು ನಡೆಯುವ ದತ್ತ ದೀಪೋತ್ಸವ ಹಾಗೂ 13ರಂದು ನಡೆಯುವ ಮೆರವಣಿಗೆ ಪೊಲೀಸ್ ಭದ್ರತೆ ಒದಗಿಸಲಾಗುವುದು. ಕುಡಿಯುವ ನೀರು, ಪಾರ್ಕಿಂಗ್ ಮತ್ತು ಸ್ವಚ್ಛತಾ ವ್ಯವಸ್ಥೆ ಮಾಡಲಾಗುವುದು ಎಂದರು.
ಶ್ರೀರಾಮ ಸೇನೆಯ ಅಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ, ನ.7ರಂದು ಆಯಾ ಗ್ರಾಮಗಳಲ್ಲಿ ಮಾಲಾಧಾರಣ ಕಾರ್ಯಕ್ರಮ ನಡೆಯಲಿದ್ದು, ನಗರದಲ್ಲಿ 150 ಜನ ಮಾಲಾಧಾರಣೆ ಮಾಡಲಿದ್ದಾರೆ. 10ರಂದು ನಗರದ 5 ದೇವಾಲಯಗಳಲ್ಲಿ ದೀಪ ಬೆಳಗುವುದು ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ. ನ.12ರಂದು ಬಸವನಹಳ್ಳಿ ರಸ್ತೆಯಲ್ಲಿ ಪಡಿ ಸಂಗ್ರಹ, ಭಿಕ್ಷಾಟನೆ ಕಾರ್ಯಕ್ರಮ ನಡೆಯಲಿದೆ. 13ರ ಬೆಳಗ್ಗೆ ಶಂಕರ ಮಠದಿಂದ ಮೆರವಣಿಗೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 8 ಸಾವಿರ ಭಕ್ತರು ಆಗಮಿಸಲಿದ್ದಾರೆ. ಎಂ.ಜಿ ರಸ್ತೆ, ಆಜಾದ್ ಪಾರ್ಕ್ ಮೂಲಕ ಯಾತ್ರೆ ನಡೆಯಲಿದೆ. ಬೆಳಗ್ಗೆ ಗಂಟೆ 11.30ಕ್ಕೆ ದತ್ತಪೀಠದ ಪಾದುಕೆ ದರ್ಶನಕ್ಕೆ ತೆರಳಲಾಗುತ್ತದೆ ಎಂದು ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ಅಭಿಯಾನದ ಸಂದರ್ಭದಲ್ಲಿ ಭಿನ್ನ ಕೋಮಿನ ಭಾವನೆಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರು. ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ಜಿ.ಪಂ. ಸಿಇಒ ಜಿ.ಪ್ರಭು, ಉಪವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ವಿನಾಯಕ ಸಾಗರ್ ಇತರರಿದ್ದರು.