ಬೆಳ್ತಂಗಡಿ; ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇಂದು ಬೆಳ್ತಂಗಡಿಯ ರಿಕ್ಷಾ ಪಾರ್ಕಿಂಗ್ ಬಳಿ ನಡೆದ ಬೆಳ್ತಂಗಡಿ ನಗರ, ಕುವೆಟ್ಟು ಮತ್ತು ಕಣಿಯೂರು ಮಹಾಶಕ್ತಿಕೇಂದ್ರ ವ್ಯಾಪ್ತಿಯ ಬೃಹತ್ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಿ ಸಾವಿರಾರು ಕಾರ್ಯಕರ್ತರ, ಮತದಾರರ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ಪರವಾಗಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಅವರು ಇಡೀ ಬೆಳ್ತಂಗಡಿ ಕ್ಷೇತ್ರ ಇಂದು ಅಭಿವೃದ್ಧಿಯ ಧ್ವನಿಯಾಗಿ ಬೆಳೆದು ನಿಂತಿದೆ. ನೆರೆ, ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಮೂಲಕ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಅತ್ಯಂತ ಕಾಳಜಿಯಿಂದ ಬಡವರ ಸೇವೆಗೈದ ಏಕೈಕ ಶಾಸಕ ಅದು ಹರೀಶ್ ಪೂಂಜ. ಅತೀ ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಹರೀಶ್ ಪೂಂಜ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವುದೇ ನಮ್ಮ ಸಂಕಲ್ಪವಾಗಿರಲಿ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹರಿಕೃಷ್ಣ ಬಂಟ್ವಾಳ ಬೆಳ್ತಂಗಡಿಯಲ್ಲಿ ಜಾತಿರಾಜಕಾರಣ ಮಾಡುವವರು ಈಕಡೆ ತಲೆ ಹಾಕಿಯೂ ಮಲಗಬಾರದು ಆ ರೀತಿಯಲ್ಲಿ ಅವರನ್ನು ಬೆಳ್ತಂಗಡಿಯ ಜನತೆ ಸೋಲಿಸಬೇಕು ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಐದು ವರ್ಷಗಳ ಕಾಲ ಶ್ರಮಿಕನ ರೀತಿಯಲ್ಲಿ ಬೆಳ್ತಂಗಡಿ ಕ್ಷೇತ್ರದ ಕೆಲಸ ಮಾಡಿದ್ದೇನೆ. ಮುಂದೆ ಅವಕಾಶ ಮಾಡಿಕೊಟ್ಟರೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುತಿಸುವಂತೆ ಬೆಳ್ತಂಗಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು.
ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಮಂಡಲ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಹಿರಿಯರಾದ ಸುಬ್ರಮಣ್ಯ ಅಗರ್ತ, ಧರ್ಣಪ್ಪ ಗೌಡ, ಮುಗಳಿ ನಾರಾಯಣ ರಾವ್, ನಗರ ಪಂಚಾಯತ್ ಅಧ್ಯಕ್ಷರಾದ ರಜನಿ ಕುಡ್ವ, ಅಭ್ಯರ್ಥಿ ಪ್ರಮುಖ್ ಜಯನಂದ ಗೌಡ, ಚಲನಚಿತ್ರ ನಟರಾದ ಹಿತೇಶ್ ಪೂಜಾರಿ ಕಾಪಿನಡ್ಕ, ಅನಿಶ್ ಪೂಜಾರಿ ವೇಣೂರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.