ಮಂಗಳೂರು: ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಚರ್ಚೆಯ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿರುವುದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಬಹಿರಂಗಗೊಂಡು ವೈರಲ್ ಆಗಿದೆ.
ಯಾರಿಗೂ ಹೇಳಲು ಹೋಗಬೇಡಿ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಆ ಟೀಮ್ ಅನ್ನೇ ತೆಗೆಯುವುದು, ಪೂರ್ತಿ ಹೊಸ ಟೀಮ್ ಮಾಡುತ್ತಿದ್ದೇವೆ, ಈಗ ಸದ್ಯಕ್ಕೆ ಇನ್ನು ಯಾರಿಗೂ ಕೊಡಬೇಡಿ ಅಂದಿದ್ದಾರೆ, ಏನೂ ತೊಂದರೆ ಇಲ್ಲ, ಹೆದರಬೇಡಿ, ಇದ್ದೇವೆ, ಏನೂ ಹೆದರಬೇಡಿ, ಯಾರು ಆದರೂ ಕೂಡಾ ನಮ್ಮ ಕೈಯಲ್ಲೇ ಇನ್ನು ಇರುತ್ತದೆ, ಮೂರು ಹೆಸರು ಇದೆ, ಯಾವುದು ಬೇಕಾದರೂ ಆಗಲು ಚಾನ್ಸ್ ಇದೆ, ಇಲ್ಲಿನವರನ್ನು ಯಾರನ್ನೂ ಮಾಡುವುದಿಲ್ಲ, ದೆಹಲಿಯಿಂದಲೇ ಹಾಕುತ್ತಾರೆ ಎಂದು ಆಡಿಯೋ ಕ್ಲಿಪ್ ನಲ್ಲಿ ಮಾತುಕತೆ ನಡೆದಿದೆ. ವೈರಲ್ ಆಗಿರುವ 47 ಸೆಕೆಂಡ್ ಗಳ ಆಡಿಯೋ ಕ್ಲಿಪ್ ನಲ್ಲಿ ತುಳು ಭಾಷೆಯಲ್ಲಿ ಮಾತನಾಡಲಾಗಿದೆ. ಸಿಎಂ ನಾಯಕತ್ವ ಬದಲಾವಣೆ ಬೆಳವಣಿಗೆಗಳ ಮಧ್ಯೆ ಈ ಆಡಿಯೋ ಕ್ಲಿಪ್ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.