ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ತಾಲೂಕಿನಾದ್ಯಂತ ಅಕ್ರಮವಾಗಿ ಗಾಂಜಾ ಶೇಖರಿಸಿ ವಿತರಣೆ ಮಾಡುತ್ತಿದ್ದ ಮತ್ತು ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮೇಲೆ ನಿಗಾ ಇಡಲು ಮಾನ್ಯ ಪೊಲೀಸ್ ಅಧೀಕ್ಷಕರವರು ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬಂಟ್ವಾಳ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರು ನಿರ್ದೇಶನದಂತೆ ಬಂಟ್ವಾಳ ತಾಲೂಕಿನಲ್ಲಿ ಅಕ್ರಮ ಗಾಂಜಾ ಪತ್ತೆ ಹಚ್ಚಲು ತಂಡವನ್ನು ರಚಿಸಿದ್ದರು.  ಅದರಂತೆ ಖಚಿತ ಮಾಹಿತಿಯ ಮೇರೆಗೆ ಇಂದು  ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ನೇತೃತ್ವದ ತಂಡ ಹಾಗೂ ಡಿವೈಎಸ್ಪಿ ಅವರ ವಿಶೇಷ ತಂಡ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಅಕ್ರಮವಾಗಿ ಸುಮಾರು 30 ಸಾವಿರ ಮೌಲ್ಯದ ಒಂದು ಕೆ.ಜಿ 150 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಕ್ಬಾಲ್ ಅಲಿಯಾಸ್ ಕಡ್ಲೆ ಇಕ್ಬಾಲ್(42) ಎಂಬಾತನನ್ನು ಬಂಧಿಸಿದ್ದಾರೆ.

ಈ ಪ್ರಕರಣದ ಸಹ ಆರೋಪಿಗಳಾದ ಸಜೀಪನಡುವಿನ ಎಸ್.ಕೆ ರಫೀಕ್ ಮತ್ತು ಕಂಚಿನಡ್ಕ ಪದವಿನ ಮೋನು ಅಲಿಯಾಸ್ ಪಿಲಿ ಮೋನು ತಲೆಮರೆಸಿಕೊಂಡಿರುತ್ತಾರೆ. ಈ ಬಗ್ಗೆ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ. ಎಂ.ಎಸ್, ಜನಾರ್ಧನ ,ಸುರೇಶ ,ಬಂಟ್ವಾಳ ಉಪವಿಭಾಗದ  ಡಿವೈಎಸ್ಪಿ ವೆಲೈಂಟೈನ್ ಡಿಸೋಜಾ ಅವರ ವಿಶೇಷ ತಂಡದ ಸಿಬ್ಬಂದಿ ಉದಯ್ , ಪ್ರವೀಣ್ ದೇವಾಡಿಗ,ಇರ್ಷಾದ್ ಪಡಂಗಡಿ, ಪ್ರಶಾಂತ್, ಗೋಣಿಬಸಪ್ಪ,  ವಿವೇಕ್, ಕುಮಾರ್ ರವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.