ಬೆಂಗಳೂರು: ತಾನು ಹಿಂದು ಎಂದು ನಂಬಿಸಿ ಪ್ರೇಮವಿವಾಹವಾದ ವ್ಯಕ್ತಿ, ತನ್ನನ್ನು ಬಲವಂತವಾಗಿ ಇಸ್ಲ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ ಎಂದು ಆರೋಪಿಸಿ ಬೆಂಗಳೂರಿನ ಮಾರತ್ತಹಳ್ಳಿಯ ರಾಮಾಂಜನೇಯ ಲೇಔಟ್ನ 29 ವರ್ಷದ ಮಹಿಳೆ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಆಕೆಯ ಪತಿ ಸಿದ್ಧಾರ್ಥ ಅಲಿಯಾಸ್ ಮೊಹಮ್ಮದ್ ಸಾದಿಕ್ ಹಾಗೂ ಆತನ ಮನೆಯವರು ಸೇರಿ ಆರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ?
2016ರಲ್ಲಿ ದೂರು ನೀಡಿದ ಮಹಿಳೆ ಮತ್ತು ಸಾದಿಕ್ ಮಾರತ್ತಹಳ್ಳಿಯ ಕಂಪನಿಯೊಂದರಲ್ಲಿ ಸಹೋದ್ಯಗಿಗಳಾಗಿ ಮಾಡುತ್ತಿದ್ದರು. ಈ ವೇಳೆ ಸಾದಿಕ್, ತಾನೊಬ್ಬ ಅನಾಥ ಮತ್ತು ತನ್ನ ಹೆಸರು ಸಿದ್ಧಾರ್ಥ ಎಂದು ಹೇಳಿದ್ದ. ಸಿದ್ಧಾರ್ಥ ಹಿಂದೂ ಎಂದು ನಂಬಿ ಸ್ನೇಹ ಮಾಡಿದ್ದ ಮಹಿಳೆ, ಸ್ನೇಹ ಪ್ರೀತಿಗೆ ತಲುಪಿ ಸಂಬಂಧ ಮದುವೆಯ ಮುಂಚೆಯೇ ದೈಹಿಕ ಸಂಪರ್ಕ ಬೆಳೆಸುವವರೆಗೆ ಮುಂದುವರೆದಿತ್ತು. ಎರಡು ವರ್ಷ ಪ್ರೀತಿಯಲ್ಲಿ ತೇಲಾಡಿದ್ದ ಈ ಜೋಡಿ ಕಳೆದ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು, ನಂತರ ದೇವಳದ ಗಣಪತಿ ವಿಗ್ರಹದ ಮುಂದೆ ವಿವಾಹವಾಗಿದ್ದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ‘ನಾನು ಹಿಂದು ಅಲ್ಲ, ನನ್ನ ನಿಜವಾದ ಹೆಸರು ಮೊಹಮ್ಮದ್ ಸಾದಿಕ್’ ಎಂದು ತಿಳಿಸಿದ್ದ. ತಮ್ಮ ಸಂಬಂಧಿಕರನ್ನು ಒಪ್ಪಿಸಿ ವಿನೋಬಾನಗರದ ತನ್ನ ಮನೆಗೆ ಕರೆದೊಯ್ದು ತಾಯಿ, ಸಹೋದರ ಮತ್ತು ಅತ್ತೆಯನ್ನು ಪರಿಚಯ ಮಾಡಿಸಿದ್ದ. ಬಳಿಕ ಸಾದಿಕ್ ಮತ್ತು ಆತನ ಕುಟುಂಬಸ್ಥರು ಬಲವಂತವಾಗಿ ಈ ಮಹಿಳೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಮಧ್ಯೆ ಮಹಿಳೆ ಗರ್ಭಿಣಿಯಾಗಿದ್ದ ವಿಷಯ ತಿಳಿದು ಪತಿ ಹಾಗೂ ಆತನ ಸಂಬಂಧಿಕರು ಗರ್ಭಪಾತ ಮಾಡಿಸಿದರು. ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡು ಮನೆಯಿಂದ ಹೊರಹಾಕಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸಾದಿಕ್ ನ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ ನಂತರ ಕೆಲದಿನಗಳಲ್ಲೇ ಆತನ ಸ್ನೇಹಿತ ಇಮ್ರಾನ್ ಷರೀಫ್ ಜೊತೆಯೂ ಮಲಗುವಂತೆ ಪತ್ನಿಗೆ ಒತ್ತಾಯಿಸಿದ್ದಾನೆ ಮತ್ತು ಈ ವಿಷಯವನ್ನು ಬೇರೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ದೂರಿನ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೆ.ಜಿ. ಹಳ್ಳಿ ಪೊಲೀಸರು ತಿಳಿಸಿದ್ದಾರೆ.