ಮಂಗಳೂರು : ಆರ್ಥಿಕ ಸಮಸ್ಯೆಯ ಕಾರಣದಿಂದ ಇನ್ನೇನು ರದ್ದುಗೊಳ್ಳುತ್ತಿದೆ ಎನ್ನುವ ಬಡ ಹಿಂದೂ ಕುಟುಂಬದ ಹೆಣ್ಣುಮಗಳ ವಿವಾಹವನ್ನು ಮುಸ್ಲಿಂ ಕುಟುಂಬವೊಂದು ಮುಂದೆ ನಿಂತು ಖರ್ಚು-ವೆಚ್ಚವನ್ನೆಲ್ಲಾ ವಹಿಸಿಕೊಂಡು ವಿವಾಹ ನಡೆಸಿಕೊಟ್ಟ ಘಟನೆ ಉಳ್ಳಾಲದ ಅಲೇಕಳದಲ್ಲಿ ನಡೆದಿದೆ.
ರಜಾಕ್ ಹಾಗೂ ಸುರೇಶ್ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು , ಇವರಿಬ್ಬರು ಈಗಲೂ ಅಣ್ಣ-ತಮ್ಮಂದಿರಂತೆ ಇದ್ದಾರೆ. ಹಿಂದೆ ಮಂಗಳೂರಿನ ಶಕ್ತಿ ನಗರದಲ್ಲಿ ವಾಸವಿದ್ದ ಸುರೇಶ್(65 ವ) ಹಾಗೂ ಅವರ ತಂಗಿ, ತಂಗಿಯ ಮಗಳು ಕವನ ಹಾಗೂ ಪತಿ ತೀರಿಹೋದ ಓರ್ವ ಮಹಿಳೆ ಹಾಗೂ ಸಣ್ಣ ಹುಡುಗಿ ಇವರೆಲ್ಲರೂ ಇತ್ತೀಚೆಗೆ ಮಂಚಿಲ ಎಸ್ಪಿ ಕಾಂಪೌಂಡ್ನ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು.
ಸುರೇಶ್ ಅವರು ತಮ್ಮ ಸಮಸ್ಯೆಯನ್ನು ರಜಾಕ್ ಬಳಿ ಹೇಳಿಕೊಂಡಿದ್ದು, ಕೂಡಲೇ ರಜಾಕ್ ಪಂಚ ಭಾಷಾ ಕ್ರಿಕೆಟ್ ಕಾಮೆಂಟ್ರಿ ಖ್ಯಾತಿಯ ರಿಯಾಜ್ ಅವರನ್ನು ಸ್ಥಳಕ್ಕೆ ಕರೆಸಿ ಸುರೇಶ್ ಅವರ ಕುಟುಂಬಕ್ಕೆ ಗ್ಯಾಸ್ ಹಾಗೂ ರೇಶನ್ ವ್ಯವಸ್ಥೆ ಮಾಡಿಸಿದ್ದಾರೆ. ಬಳಿಕ ಕೆಎಂ -ಎಂಬಿಎಂ ಮ್ಯಾರೇಜ್ ಫಂಡ್ ಬಳಸಿಕೊಂಡು ಬಡ ಹಿಂದೂ ಕುಟುಂಬದ ಹೆಣ್ಣುಮಗಳ ವಿವಾಹದ ಖರ್ಚು ವೆಚ್ಚವನ್ನು ವಹಿಸಿಕೊಳ್ಳಲು ತೀರ್ಮಾನಿಸುತ್ತಾರೆ. ಅಲ್ಲದೇ, ಶಾಸಕ ಯು.ಟಿ ಖಾದರ್ ಅವರು ಕೂಡಾ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿ, ಧನಸಹಾಯ ನೀಡಿದ್ದರು. ಅದರಂತೆ ಕವನಳ ಮೆಹೆಂದಿ ಶಾಸ್ತ್ರ ನಡೆದಿದ್ದು, ಭಾನುವಾರ ತಲಪಾಡಿಯ ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿವಾಹ ನೆರವೇರಿದೆ.