ಚಿಕ್ಕಮಗಳೂರು : ಅನೈತಿಕ ಸಂಬಂಧಕ್ಕೆ ಗೃಹಿಣಿ ಬಲಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಚಿರಂಜೀವಿಯನ್ನು ಕೊಲೆ ನಡೆದ 5 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿ ಕಾಡಿನೊಳಗೆ ಅವಿತು ಕುಳಿತಿದ್ದ ಆರೋಪಿ ಚಿರಂಜೀವಿಯನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೋಧ ನಜೆಸಿ ಬಂಧಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ 6 ಕಿ.ಮೀ. ದೂರದ ಕಾಡಿನಲ್ಲಿ ಆರೋಪಿ ಚಿರಂಜೀವಿಯನ್ನು ಬಂಧಿಸಲಾಗಿದೆ.ಬಾಳೆಹೊನ್ನೂರಿನ ಗಡಿಗೇಶ್ವರ ಬಳಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?;
ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ತೃಪ್ತಿ (25) ಎಂಬ ಮಹಿಳೆಯನ್ನು ಆಕೆಯ ವಾಟ್ಸಾಪ್ ಗೆಳೆಯ ಚಿರಂಜೀವಿ ಕೊಲೆಗೈದು ಪರಾರಿಯಾಗಿದ್ದ. ಮೃತ ತೃಪ್ತಿಗೆ ವಾಟ್ಸಾಪ್ ಮೂಲಕ ಆರೋಪಿ ಚಿರಂಜೀವಿ ಪರಿಚಿತನಾಗಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.ತಿಂಗಳ ಹಿಂದೆ ಚಿರಂಜೀವಿ ಜೊತೆ ಮೃತ ತೃಪ್ತಿ ಓಡಿ ಹೋಗಿದ್ದಳು. ಬಳಿಕ ವಾಪಾಸ್ ಕರೆತಂದು ಕುಟುಂಬದವರು ರಾಜಿ ಸಂಧಾನ ಮಾಡಿದ್ದರು. ಆ ಬಳಿಕ ಚಿರಂಜೀವಿ ಜೊತೆ ತೃಪ್ತಿ ಸಂಪರ್ಕ ಕಡಿದುಕೊಂಡಿದ್ದಳು.ಇದರಿಂದ ಚಿರಂಜೀವಿ ಕುಪಿತನಾಗಿದ್ದ.
ಇಂದು ಚಿರಂಜೀವಿ ತೃಪ್ತಿ ಮನೆಗೆ ಬಂದಿದ್ದ. ಹೀಗೆ ಬಂದವನು ಮಕ್ಕಳ ಎದುರೇ ತೃಪ್ತಿಗೆ ಚಾಕುವಿನಿಂದ ಚುಚ್ಚಿದ್ದ. ಚಾಕುವಿನಿಂದ ಚುಚ್ಚಿ ಸಾಯಲಿಲ್ಲ ಎಂದು ಚಿರಂಜೀವಿ ಮನೆ ಹಿಂದಿನ ಕೆರೆಗೆ ಎಸೆದಿದ್ದು ಪರಾರಿಯಾಗಿದ್ದ. ಈ ವೇಳೆ ತೃಪ್ತಿ ಪತಿಗೆ ಕೆಲಸಕ್ಕೆ ಹೋಗಿದ್ದರು. ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಚಿರಂಜೀವಿಯನ್ನು ಬಂಧಿಸಿದ್ದಾರೆ.


