ಮೈಸೂರು: ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಡೆದಿದ್ದ 14 ಸೈಟ್ಗಳ ಬಗ್ಗೆ ಲೋಕಾಯುಕ್ತ ತನಿಖೆ ಅಂತಿಮ ಹಂತಕ್ಕೆ ಬಂದಿದೆ.
ಮೂಡಾದಲ್ಲಿ ಲೋಕಾಯುಕ್ತ ತಂಡವು ಜ.22 ಬುಧವಾರದಂದು ಇದೀ ದಿನವಿದ್ದು, ತನಿಖೆಗಾಗಿ ಕೆಲ ಆಡಿಯೋ ಹಾಗೂ ಕಡತಗಳನ್ನು ತೆಗೆದುಕೊಂಡಿದ್ದರು. ಇನ್ನು ಈ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ವರದಿಯನ್ನು ನ್ಯಾಯಾಲಯಕ್ಕೆ ನೀಡಲು ಜನವರಿ 27 ಲೋಕಾಯುಕ್ತಕ್ಕೆ ಡೆಡ್ಲೈನ್ ಆಗಿದ್ದು, ಈ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸರು ಅಂತಿಮ ಹಂತದ ವಿಚಾರಣೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಡಾ ಸದಸ್ಯರ ಅಭಿಪ್ರಾಯ 50:50 ಅನುಪಾತದ ಸೈಟು ಹಂಚಿಕೆ ವಿಚಾರದಲ್ಲಿ ಏನಾಗಿತ್ತು ಎನ್ನುವ ಬಗ್ಗೆಯೂ ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ನೇತೃತ್ವದ ತಂಡ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆಯಲ್ಲಿ 2020ರ ನ.11ರಂದು ನಡೆದ ಸಭೆ ನಡಾವಳಿ ಪರಿಶೀಲಿಸಿ, ದಾಖಲಿಸಿದ್ದ ಧ್ವನಿ ಸುರಳಿ ಕೇಳಿಸಿಕೊಂಡು ಅದರ ಮಾಹಿತಿಯನ್ನೂ ದಾಖಲಿಸಿಕೊಂಡಿದೆ. ಅಂದಿನ ಸಭೆಯಲ್ಲಿ ಮಾಜಿ ಆಯುಕ್ತ ನಟೇಶ್ ಹಾಗೂ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಇದ್ದ ಅವಧಿಯ ಸಭೆ ಆಡಿಯೋ ಇದ್ದಾಗಿದ್ದು ಅಂದಿನ ಸಭೆಯಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಶಾಸಕ ತನ್ವೀರ್ ಸೇಠ್, ಜಿ.ಟಿ ದೇವೇಗೌಡ, ಎಸ್.ಎ ರಾಮ್ದಾಸ್, ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಸೇರಿ ಹಲವು ಪ್ರಮುಖರು ಭಾಗಿಯಾಗಿದ್ದರು. ಈ ಎಲ್ಲಾ ದಾಖಲೆಗಳನ್ನು ಲೋಕಾಯುಕ್ತ ಮೂಲಗಳು ಸಂಗ್ರಹಿಸಿದೆ ಎನ್ನಲಾಗಿದೆ.