ನವದೆಹಲಿ: ಕೇಂದ್ರ ದೆಹಲಿಯ ಹಲವೆಡೆಯಲ್ಲಿ ಉದ್ಯಮಿಗಳಾದ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರ ಚಿತ್ರದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿದೆ. ಇದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರದಂದು ತಿಳಿಸಿದರು.
ಈ ಭಿತ್ತಿಪತ್ರಗಳ ಮೇಲೆ ‘ಮೋದಿ ಕಾ ಅಸ್ಲಿ ಪರಿವಾರ್’ (ಮೋದಿ ಅವರ ಅಸಲಿ ಪರಿವಾರ) ಎಂದು ಬರೆಯಲಾಗಿದೆ. ಅದರ ಅಡಿಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಎಂದು ಬರೆಯಲಾಗಿದೆ.
ಇನ್ನು ಈ ವಿಚಾರದ ಕುರಿತು ನವದೆಹಲಿಯ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ನೀಡಿದ್ದ ದೂರನ್ನು ಆಧರಿಸಿ, ದೆಹಲಿ ಸ್ವತ್ತುಗಳ ವಿರೂಪ ತಡೆ – ಕಾಯ್ದೆ ಅಡಿ ಅಪರಿಚಿತರ ವಿರುದ್ಧ ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ. ಈ ಭಿತ್ತಿಪತ್ರಗಳನ್ನು ಪ್ರಕಟಿಸಿದ ಮತ್ತು ಅಂಟಿಸಿದವರ ಹೆಸರನ್ನು ಅವುಗಳ ಮೇಲೆ ಲಗತ್ತಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಈಚೆಗೆ ಮೋದಿ ಅವರಿಗೆ ಕುಟುಂಬವಿಲ್ಲ ಎಂದು ವ್ಯಂಗ್ಯವಾಡಿದ್ದರು. ಮೋದಿ ಅದಕ್ಕೆ ತಿರುಗೇಟು ನೀಡಿ, ‘ದೇಶದ 140 ಕೋಟಿ ಭಾರತೀಯರು ನನ್ನ ಕುಟುಂಬ ಎಂದಿದ್ದರು’. ಆ ಬಳಿಕ, ಸಾಮಾಜಿಕ ಜಾಲತಾಣದಲ್ಲಿ “ಮೋದಿ ಕಾ ಪರಿವಾರ” ಎಂಬ ಅಭಿಯಾನವನ್ನು ಬಿಜೆಪಿ ಪಕ್ಷವು ಆರಂಭಿಸಿತು.