ಲಡಾಖ್, ಜುಲೈ 3: ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಹಾಗೂ ಭಾರತದ ಸೇನೆ ನಡುವೆ ನಡೆದ ಘರ್ಷಣೆ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಆ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ ಪ್ರಧಾನಿ.
ಗಡಿ ಉದ್ವಿಗ್ನತೆ ಬಗ್ಗೆ ಜೂನ್ 5 ರಿಂದಲೂ ಭಾರತ ಮತ್ತು ಚೀನಾ ದೇಶಗಳ ಸೇನಾ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಲೇ ಇದೆ. ಜೊತೆಗೆ ಜೂನ್ 15ರಂದು ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷವಾಗಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಇನ್ನೂ ಕೆಲವರು ಗಾಯಗೊಂಡಿದ್ದರು. ಇದಾದ ಬಳಿಕ ಎರಡೂ ದೇಶಗಳ ವಿದೇಶಾಂಗ ಇಲಾಖಾ ಮಟ್ಟದ ಮಾತುಕತೆ ಕೂಡ ನಡೆದಿತ್ತು. ಆದರೂ ಪರಿಸ್ಥಿತಿ ತಿಳಿಗೊಂಡಿರಲಿಲ್ಲ. ಹೀಗಾಗಿ ಪರಿಸ್ಥಿತಿ ಅವಲೋಕಿಸಲು ಇಂದು ಪ್ರಧಾನಿ ಮೋದಿ ಅಚಾನಕ್ ಭೇಟಿ ಕೊಟ್ಟಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆಯೇ ಲಡಾಕ್ ಗೆ ತಲುಪಿದ್ದು, ಸೇನಾ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಜೊತೆಗೆ ಗಡಿಯಲ್ಲಿನ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಜೂನ್ 15 ರ ರಾತ್ರಿ ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟಿನ ಬಳಿಕ ಇಂದು ಲಡಾಖ್ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಬೇಕಿತ್ತು. ಆದರೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಭೇಟಿ ನೀಡಿದ್ದಾರೆ. ಜೊತೆಗೆ ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಿ ಮೋದಿ ಸಹ ಲಡಾಖ್ ನ ಲೇಹ್ ಗೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.