ವಿಟ್ಲ: ಇತ್ತೀಚಿಗಿನ ದಿನಗಳಲ್ಲಿ ಗೋ ಹತ್ಯೆ ಜಾಸ್ತಿಯಾಗುತ್ತಿದ್ದು ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ. ಇಂದು ಮುಂಜಾನೆಯೇ ಹಿಂದೂ ಪರ ಕಾರ್ಯಕರ್ತರು ಕ್ಷಿಪ್ರ ದಾಳಿ ನಡೆಸಿ ಗೋ ಸಾಗಾಟವನ್ನು ತಡೆದಿದ್ದಾರೆ. ವಿಟ್ಲದ ಪದವು ಕೋಡಂದೂರು ರಸ್ತೆಯಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದರು. ಇದನ್ನರಿತ ಹಿಂದೂ ಪರ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಸಿದ್ದಾರೆ.
ವಾಹನ ಹಾಗೂ ವಾಹನದ ಮಾಲಕರನ್ನು ತಕ್ಷಣ ಬಂಧಿಸಿ ಸುರತ್ಕಲ್ ಗಂಜೀಮಠ ಮಾದರಿಯಲ್ಲಿ ಆರೋಪಿಗಳ ಆಸ್ತಿ ಜಪ್ತಿ ಮಾಡಬೇಕೆಂದು ಹಿಂದೂ ಸಂಘಟನೆ ಕಾರ್ಯಕರ್ತರು ಬಹುದಿನಗಳಿಂದ ಆಗ್ರಹಿಸುತ್ತಿದ್ದು ಇದಕ್ಕೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಶಾಸಕ ಸಂಜೀವ ಮಠಂದೂರು ಪ್ರತಿಕ್ರಿಯಿಸಿದ್ದಾರೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸ್ಫೂರ್ತಿ ಪಡೆದಂತೆ, ಪುತ್ತೂರು ವಿಧಾನಸಭಾ ವ್ಯಾಪ್ತಿಯಲ್ಲೂ ಕೂಡ ಆಸ್ತಿ ಮುಟ್ಟುಗೋಲಿಗೆ ಯೋಜನೆಗಳು ಸಜ್ಜಾಗುತ್ತಿವೆ. ಕೇಪು ಗ್ರಾಮದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದು ಬೆಳಕಿಗೆ ಬಂದಿದೆ. ಕೇರಳಕ್ಕೆ ಸಾಗಾಟ ಮಾಡಿ ಅಲ್ಲಿ ವಧೆ ಮಾಡಲಾಗುತ್ತದೆ. ಇಂತಹ ಕೃತ್ಯ ಎಸಗಿದವರನ್ನು ಪೊಲೀಸರು ಬಂಧಿಸಬೇಕು. ಗೋ ಕಳ್ಳತನ, ಗೋವಧೆ ಮಾಡುವ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಜೊತೆಗೂಡಿ ಆಸ್ತಿ ಮುಟ್ಟುಗೋಲು, ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿ ಮಾಡಬೇಕು.
ಆರೋಪಿಗಳನ್ನು ಜಾಮೀನು ರಹಿತ ಕೇಸ್ ದಾಖಲಿಸಿ ಶಾಶ್ವತವಾಗಿ ಜೈಲಿಗಟ್ಟಬೇಕು. ಇಂತರ ಕಾನೂನು ಬಾಹಿರ ಚಟುವಟಿಗಳನ್ನು ಪೊಲೀಸ್ ಇಲಾಖೆ ತಡೆಯಬೇಕು. ಕಟ್ಟುನಿಟ್ಟಾಗಿ ಪೊಲೀಸರು ಕ್ರಮ ಪಾಲಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಇಂತಹ ಕೃತ್ಯಗಳಿಂದ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಯಿದೆ. ಸರಕಾರ ಜಾರಿ ಮಾಡಿರುವ ಗೋ ಹತ್ಯೆ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು. ಯಾರು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೋ ಅವರ ಆಸ್ತಿಯನ್ನು ಮುಟ್ಟಗೋಲು ಮಾಡಬೇಕು. ಗೋ ಹತ್ಯೆ ತಡೆಯುವ ಹಿಂದೂ ಕಾರ್ಯಕರ್ತರ ಬೆಂಬಲಕ್ಕೆ ನಾನಿದ್ದೇನೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಶಾಸಕರು ಗೋವುಗಳನ್ನು ರಕ್ಷಣೆ ಮಾಡಿದ ಹಿಂದೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.