ತುಮಕೂರು: ನಿಜಕ್ಕೂ ಒಬ್ಬ ಜನ ನಾಯಕ ಹೇಗಿರಬೇಕು ಅನ್ನೋದಕ್ಕೆ ಕುಣಿಗಲ್ ಶಾಸಕ ಡಾ. ರಂಗನಾಥ್ ಮಾದರಿ ಅಂದರೆ ಅತಿಶಯೋಕ್ತಿ ಅಲ್ಲ.
ಕೀಲು ನೋವಿನಿಂದ ಬಳಲುತ್ತಿದ್ದ ಬಡ ಮಹಿಳೆಗೆ ತಾವೇ ಸ್ವತಃ ಉಚಿತ ಆಪರೇಷನ್ ಮಾಡಿ ಕುಣಿಗಲ್ ಶಾಸಕ ಡಾ.ರಂಗನಾಥ್ ಮಾದರಿಯಾಗಿದ್ದಾರೆ. ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ ಕೀಲು ನೋವಿನಿಂದ ಬಳಲುತ್ತಿದ್ದಾರೆ. ಕಳೆದ 10 ವರ್ಷದ ಹಿಂದೆ ಯಶಸ್ವಿನಿ ಯೋಜನೆಯಡಿ ಕೀಲು ಆಪರೇಷನ್ ಮಾಡಿಕೊಂಡಿದ್ದರು. ಆದರೆ ಮತ್ತೇ ಕೀಲು ಡಿಸ್ ಲೊಕೆಟ್ ಆಗಿತ್ತು. ಸರ್ಕಾರದ ಉಚಿತ ಯೋಜನೆಯಲ್ಲಿ ಒಂದೇ ಖಾಯಿಲೆಗೆ ಎರಡು ಬಾರಿ ಸರ್ಜರಿಗೆ ಅವಕಾಶ ಇರಲಿಲ್ಲ. ಸ್ವತಃ ರೋಗಿಗಳೇ ಹಣ ಸಂದಾಯ ಮಾಡಿ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು.

ಈ ಶಸ್ತ್ರಚಿಕಿತ್ಸೆಗಾಗಿ ಆಕೆಗೆ ಸುಮಾರು 4 ರಿಂದ 5 ಲಕ್ಷ ರೂ. ಅಗತ್ಯವಿತ್ತು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಮಹಿಳೆ ದಿಕ್ಕು ತೋಚದೆ ಶಾಸಕರ ಬಳಿ ಬಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಮಹಿಳೆಯ ನೋವನ್ನು ಆಲಿಸಿದ ಶಾಸಕರು ಆಕೆಗೆ ಸಾಂತ್ವನ ಹೇಳಿ, ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಉಚಿತವಾಗಿ ಸ್ವತಃ ತಾವೇ ಆಪರೇಷನ್ ಮಾಡಿದ್ದಾರೆ., ಶಾಸಕ ರಂಗನಾಥ್ ಮೂಲತಃ ಆರ್ಥೋಪೆಡಿಕ್ ವೈದ್ಯರಾಗಿದ್ದು ಅವರ ಕೆಲಸಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ..
ಇನ್ನು ಶಾಸಕ ಡಾ.ರಂಗನಾಥ್, ಇದೇ ಮಾದರಿಯಲ್ಲಿ ಕೀಲು ಮೂಳೆ ಸಮಸ್ಯೆ ಇರುವ 23 ಮಹಿಳೆಯರಿಗೆ ಉಚಿತ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ.


