ವಾಮಂಜೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ. ವೈ. ಭರತ್ ಶೆಟ್ಟಿ ಅವರ ಬಹುಮತದ ಗೆಲುವಿಗೆ ಸಂಕಲ್ಪ ಮಾಡಲಾಗಿತ್ತು. ಅದರಂತೆ ವಾಮಂಜೂರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಾಮಂಜೂರು ತಿರುವೈಲಿನ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಶಾಸಕ ಡಾ. ಭರತ್ ಶೆಟ್ಟಿಯವರಿಗೆ ತುಲಾಭಾರ ಸೇವೆ ನಡೆಸಿದರು.
ಕೊರೋನಾ ಮಹಾಮಾರಿಯಿಂದಾಗಿ ಇಲ್ಲಿ ಹಿಂದಿನ ವರ್ಷ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯದ ಕಾರಣ, ವಾಮಂಜೂರು ಬಿಜೆಪಿಗರು ಈ ಬಾರಿ ಶಾಸಕರಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸೀಯಾಳ, ತುಪ್ಪದ ತುಲಾಭಾರ ಸೇವೆ ಕೈಗೊಂಡರು.
ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ ತುಲಾಭಾರ ಪೂಜೆ ನೆರವೇರಿಸಿದರು. ಈ ವೇಳೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಸಮಿತಿ ಸದಸ್ಯರಾದ ಓಂ ಪ್ರಕಾಶ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಹಾಗೂ ಕಾರ್ಪೊರೇಟರ್ ಹೇಮಲತಾ ಮತ್ತಿತರರು ಉಪಸ್ಥಿತರಿದ್ರು.