ಮಂಗಳೂರು: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರು ಎಲ್ಲಿಯವರು ಎನ್ನುವ ಬಗ್ಗೆ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ತನಿಖೆ ನಡೆಸಬೇಕು ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಒತ್ತಾಯಿಸಿದರು.
ಮಂಗಳೂರಿನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರು ಎಲ್ಲಿಯವರು ಹಾಗೆ ಇಲ್ಲಿ ಬಂದು ಯಾಕೆ ನೆಲೆಸಿದ್ದಾರೆ ಎನ್ನುವ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಕ್ಕಲೆಬ್ಬಿಸಿದ ವಲಾಸಿಗರಿಗೆ ಯಾವುದೇ ದಾಖಲೆ ಪತ್ರವನ್ನು ಕೇಳದೆಯೇ ಅವರಿಗೆ ನಾಲ್ಕೈದು ಕಿ.ಮೀ ದೂರದಲ್ಲಿ ಪುನರ್ವಸತಿ ಕಲ್ಪಿಸಲು ಮುಂದಾಗಿದೆ. ಈ ಬೆಳವಣಿಗೆಗಳ ಹಿಂದೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಕೈವಾಡ ಇದೆ, ಎಂದು ಅವರು ಆರೋಪಿಸಿದರು.
ಎರಡೂವರೆ ವರ್ಷದಲ್ಲಿ ರಾಜ್ಯದ ಬಡವರಿಗೆ ಸರ್ಕಾರ ಒಂದೇ ಒಂದು ಮನೆ ಕೊಟ್ಟಿಲ್ಲ. ನಗರದಲ್ಲಿ ವಸತಿ ಜಮೀನಿಗಾಗಿ ನಮೂನೆ 94 ಸಿ ಮತ್ತು 94ಸಿ.ಸಿ ಅಡಿ ಅರ್ಜಿ ಸಲ್ಲಿಸಲಿಕ್ಕೂ ಅವಕಾಶ ಕಲ್ಪಿಸಿಲ್ಲ. ನಮ್ಮ ರಾಜ್ಯದವರ ಪರಿಸ್ಥಿತಿ ಹೀಗಿರುವಾಗ ಹೊರರಾಜ್ಯದ ಅಕ್ರಮ ವಲಸಿಗರಿಗೆ ಮನೆ ಕಟ್ಟಿಕೊಡುವ ಔಚಿತ್ಯವಾದರೂ ಏನು ಎಂದು ಅವರು ಪ್ರಶ್ನಿಸಿದರು.


