ಮಂಗಳೂರು: ಅದಾನಿ ಕಂಪನಿಗೆ ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲ ಗುತ್ತಿಗೆಗೆ ಹಸ್ತಾಂತರಗೊಳಿಸಿದ ಬೆನ್ನಲ್ಲೇ ಏರ್ಪೋರ್ಟ್ ಹೆಸರಿನ ಕುರಿತು ಚರ್ಚೆ ಆರಂಭವಾಗಿದೆ. ಅದಾನಿ ಕಂಪನಿ ತನ್ನ ಹೆಸರನ್ನು ನಮೂದಿಸಿರುವುದನ್ನು ಖಂಡಿಸಿರುವ ಕಾಂಗ್ರೆಸ್ನ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಿಥುನ್ ರೈ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಹೆಸರು ಇಡಲು ಒತ್ತಾಯಿಸಿದ್ದು ಏಕಾಏಕಿ ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ನಾಮಕರಣದ ಬೋರ್ಡ್ ಹಾಕಿಸಿದ್ದಾರೆ.
ವಿಮಾನ ನಿಲ್ದಾಣ ಬೇಡಿಕೆ ಕುರಿತು ಮುಂದಿನ ನಿಲುವಿನ ಬಗ್ಗೆ ಮಹಾಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮಿಥುನ್ ರೈ “ಸರಕಾರ ನಮ್ಮ ಮಾತನ್ನು ಕೇಳುತ್ತಿಲ್ಲ ಇಂದಷ್ಟೇ ಅಯೋಧ್ಯೆ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಗೆ ಒಪ್ಪಿಗೆ ದೊರೆತಿದೆ ಅಂತೆಯೇ ನಮ್ಮ ನೆಲದ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು. ತುಳುವರ ಭಾವನೆಗಳಿಗೆ ಬೆಲೆ ದೊರಕಬೇಕು.
ಪಕ್ಷ ಮುಂದೆ ಕಠಿಣ ಹೋರಾಟಕ್ಕೆ ಇಳಿಯಲಿದೆ. ಉಪವಾಸ ಸತ್ಯಾಗ್ರಹ ಕೈಗೊಂಡರೂ ಸರಿ ನಮ್ಮ ನೆಲದ ವಿಮಾನ ನಿಲ್ದಾಣ ನಮ್ಮ ವೀರಪುರುಷರ ಹೆಸರಲ್ಲಿರಬೇಕು. ನಮ್ಮ ಮುಂದಿನ ತಲೆಮಾರಿಗೆ ಆ ಹೆಸರು ಉಳಿಯಬೇಕು. ಇದಕ್ಕಾಗಿ ನಮ್ಮ ಹೋರಾಟ ನಿಲ್ಲಿಸುವುದಿಲ್ಲ” ಎಂದು ಹೇಳಿದ್ದಾರೆ.