ವಿಟ್ಲ: ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪೊಯ್ಯಮೂಲೆ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪೊಯ್ಯಮೂಲೆ ನಿವಾಸಿ ಕೃಷ್ಣ ನಾಯ್ಕ್ (62) ಮೃತ ದುರ್ದೈವಿ.
ಕೃಷ್ಣ ನಾಯ್ಕ ರವರು ಸೆ.17ರಂದು ಮಧ್ಯಾಹ್ನ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪೊಯ್ಯಮೂಲೆಯಲ್ಲಿರುವ ತನ್ನ ಮನೆಯಿಂದ ಪೇಟೆಗೆಂದು ಹೇಳಿ ಹೋದವರು ಸಂಜೆಯಾದರೂ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಹತ್ತಿರದ ಮನೆಯ ಸಹಿತ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರಾದರೂ ಅವರು ಪತ್ತೆಯಾಗಿರಲಿಲ್ಲ.
ಬಳಿಕ ತನ್ನ ತಂದೆಯನ್ನು ಹುಡುಕಿ ಕೊಡುವಂತೆ ಕೃಷ್ಣ ನಾಯ್ಕ್ ರವರ ಪುತ್ರ ನವೀನಕುಮಾರ್ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಿದ್ದಂತೆ ಕೃಷ್ಣ ನಾಯ್ಕ್ ರವರ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ತೆರಳಿದ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.