ಮೈಸೂರು: ಶಾಲೆ ಆರಂಭದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ ನೀಡಿದ್ದು, ಸೆ. 21 ರಂದು ಶಾಲೆ ತರಗತಿ ಆರಂಭ ಇಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಸೆ. 21 ರಿಂದ ಶಾಲೆ ಆರಂಭವಾಗಲಿದ್ದು, ತರಗತಿ ಆರಂಭ ಆಗಲ್ಲ. ಸೆ. 21 ರಿಂದ ಕೇವಲ ಶಾಲೆ ತೆರೆಯಲಿದ್ದು, ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಸೆ. 30 ರೊಳಗೆ ಪ್ರವೇಶಾತಿ ಪ್ರಕ್ರಿಯೆ ಮುಗಿಸಬೇಕು 1-10 ನೇತರಗತಿ ಪ್ರವೇಶ ನಡೆಯಲಿದೆ ಎಂದರು.
ಖಾಸಗಿ ಶಾಲೆಗಳು ಕೇವಲ ಒಂದು ಅವಧಿಯ ಶುಲ್ಕವನ್ನು ಮಾತ್ರ ಪೋಷಕರಿಂದ ಪಡೆಯಬೇಕು. ಆಗೊಮ್ಮೆ ಸಮಸ್ಯೆಯಾದರೆ ಡಿಡಿಪಿಐ ಬಿಇಓ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಅವರಿಗೆ ಈಗಾಗಲೇ ಸರ್ಕಾರದಿಂದ ಸೂಚನೆ ಕೊಟ್ಟಿದ್ದೇವೆ. ಯಾವುದೇ ಪೋಷಕರಿಗೆ ಇದರಿಂದ ಸಮಸ್ಯೆಯಾದರೆ ಕೂಡಲೇ ಬಿಇಓ ಅವರನ್ನು ಸಂಪರ್ಕಿಸಿ ಎಂದರು.
ಸೆಪ್ಟೆಂಬರ್ 21 ರಿಂದ ಎಲ್ಲಾ ಶಿಕ್ಷಕರು ಶಾಲೆಗೆ ಬರಬೇಕು. ಸೆಪ್ಟೆಂಬರ್ 21 ರಿಂದ 9, 10, 11, 12ನೇ ತರಗತಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಏನಾದರೂ ಅನುಮಾನ ಇದ್ದರೆ ಇದರ ಬಗ್ಗೆ ಸ್ಪಷ್ಟೀಕರಣ ತೆಗೆದುಕೊಳ್ಳಬಹುದು. ಅದು ದೈನಂದಿನ ತಗರತಿ ರೀತಿ ಅಲ್ಲ. ಓದಿದ್ದು ಅರ್ಥವಾಗಿಲ್ಲ ಅಂದರೆ ಶಿಕ್ಷಕರ ಜೊತೆ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಶಾಲೆಯನ್ನು ಮತ್ತೆ ಆರಂಭಿಸಲು ಕೇಂದ್ರದ ಅನುಮತಿ ಬೇಕು. ಅನುಮತಿ ನೀಡಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಕೇಂದ್ರ ಸರ್ಕಾರ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಶಾಲೆಗೆ ಬರಲು ವಿದ್ಯಾರ್ಥಿಗಳು ಉತ್ಸಾಹಕರಾಗಿದ್ದಾರೆ. ಆದರೆ ಪೋಷಕರಿಗೆ ಇನ್ನೂ ಆತಂಕವಿದೆ. ಹೀಗಾಗಿ ಪೋಷಕರಿಂದ ಕೂಡ ಒಂದು ಅನುಮತಿ ಪತ್ರವನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.


