ಪುತ್ತೂರು: ನಾಲ್ಕು ದಿನಗಳ ಹಿಂದೆ (ಮೇ 12) ವಿಶೇಷ ರೈಲಿನ ಮೂಲಕ ಪುತ್ತೂರಿನಿಂದ 1498 ಮಂದಿ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಬಿಹಾರಕ್ಕೆ ಕಳುಹಿಸಿರುವ ಬೆನ್ನಲ್ಲೇ ಇದೀಗ ಬೆಳ್ತಂಗಡಿ, ಸುಳ್ಯ, ಸುಬ್ಯಹ್ಮಣ್ಯ, ಕಡಬ, ಬಂಟ್ವಾಳ ಸೇರಿದಂತೆ ಪುತ್ತೂರು ಉಪವಿಭಾಗದಿಂದ ಒಟ್ಟು 1520 ಮಂದಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಇಂದು ವಿಶೇಷ ರೈಲಿನ ಮೂಲಕ ಪುತ್ತೂರಿನಿಂದ ತಮ್ಮ ಊರಿಗೆ ಕಳುಹಿಸಿಕೊಡಲಾಯಿತು.
ಬೆಳ್ತಂಗಡಿ, ಸುಳ್ಯ, ಸುಬ್ಯಹ್ಮಣ್ಯ, ಕಡಬ, ಬಂಟ್ವಾಳ ಭಾಗಗಳಿಂದ 42 ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಬಂದ ಈ ವಲಸೆ ಕಾರ್ಮಿಕರನ್ನು ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರ ಮಾರುಗದ್ದೆಯಲ್ಲಿ ಒಟ್ಟು ಸೇರಿಸಿ ಅಲ್ಲಿಂದ ಅದೇ ಬಸ್ ಮೂಲಕ ರೈಲ್ವೇ ಸ್ಟೇಶನ್ಗೆ ಕರೆತರಲಾಯಿತು. ನಂತರ ಶ್ರಮಿಕ ರೈಲಿನಲ್ಲಿ ಇವರನ್ನು ಉತ್ತರಪ್ರದೇಶಕ್ಕೆ ಕಳುಹಿಸಲಾಯಿತು.
ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಎಡಿಷನಲ್ ಎಸ್ಪಿ ವಿಕ್ರಂ ಅಮ್ಟೆ, ಡಿವೈಎಸ್ಪಿ ದಿನಕರ್ ಶೆಟ್ಟಿ, ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರೀ, ಕಡಬ ತಹಶೀಲ್ದಾರ್ ಜಾನ್ಪ್ರಕಾಶ್, ಅನಂತಶಂಕರ ಸುಳ್ಯ ಜತೆ ಕಂದಾಯ ಇಲಾಖೆ ಸಿಬಂದಿ, ಕೆಎಸ್ಸಾರ್ಟಿಸಿ ಅಧಿಕಾರಿಗಳು, ರೈಲ್ವೇ ಅಧಿಕಾರಿಗಳು , ಪೊಲೀಸ್ ಸಿಬಂದಿ ಸಹಕಾರದಲ್ಲಿ 1520 ಮಂದಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ಪರಿಶೀಲನೆ ನಡೆಸಿ ಕಳುಹಿಸಿಕೊಡಲಾಯಿತು.
ಇಂದು ಪ್ರಯಾಣಿಸುತ್ತಿರುವ ವಲಸೆ ಕಾರ್ಮಿಕರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಳ ಮತ್ತು ಪುತ್ತೂರು ಮಹಾಲಿಂಗೇಶ್ವರ ದೇವಳದ ವತಿಯಿಂದ ಊಟ, ಹಾಗೂ ನಿತ್ಯ ಉಪಯೋಗಿ ಕಿಟ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ಕಬಕ ರೈಲ್ವೇ ನಿಲ್ದಾಣದಿಂದ ಹೊರಟ ಶ್ರಮಿಕ ರೈಲು ಅರಸೀಕೆರೆ, ಆಂಧ್ರ ಪ್ರದೇಶದ ಗುಂಟಕಲ್, ಮಹಾರಾಷ್ಟ್ರದ ನಾಗಪುರ, ಝಾನ್ಸಿ, ಲಕ್ನೋ ಮೂಲಕ ಸುಮಾರು 52 ಗಂಟೆಗಳಲ್ಲಿ ಉತ್ತರಪ್ರದೇಶ ತಲುಪಲಿದೆ ಎಂದು ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.