ಉತ್ತರಕನ್ನಡ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಮೆಡಿಕಲ್ ಶಾಪ್ ಸಿಬ್ಬಂದಿ ಕ್ಯಾನ್ಸರ್ ಮೆಡಿಸನ್ ಕೊಟ್ಟ ಪರಿಣಾಮ ಅದನ್ನು ಸೇವಿಸಿ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಿವಾಸಿ ಹನಮಂತಪ್ಪ ಪಾಟೀಲ (62) ಮೃತ ದುರ್ದೈವಿ.
ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಹನಮಂತಪ್ಪ ಧಾರವಾಡದ ಮಾನಸಿಕ ತಜ್ಞರೋರ್ವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿನ ವೈದ್ಯರು ಬರೆದುಕೊಟ್ಟ ಔಷಧಿಯನ್ನು ಹನಮಂತಪ್ಪ ಕುಟುಂಬಸ್ಥರು ಏಪ್ರಿಲ್ 29ರಂದು ಮೆಡಿಕಲ್ವೊಂದರಲ್ಲಿ ಮಾತ್ರೆಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಮೆಡಿಕಲ್ ಸಿಬ್ಬಂದಿ ಮಹಾ ಎಡವಟ್ಟು ಮಾಡಿದ್ದು, ಮಾನಸಿಕ ಚಿಕಿತ್ಸೆಗೆ ನೀಡುವ ಮಾತ್ರೆ ಬದಲು ಕ್ಯಾನ್ಸರ್ ಹಾಗೂ ಆರ್ಥೈಟಿಸ್ ಮಾತ್ರೆ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಹನುಮಂತಪ್ಪ ದಿನಕ್ಕೆ ಒಂದರಂತೆ ಮಾನಸಿಕ ಖಾಯಿಲೆಯ ಮಾತ್ರೆ ಎಂದು ತಿಳಿದು ಕ್ಯಾನ್ಸರ್ ಮಾತ್ರೆ ತೆಗೆದುಕೊಂಡಿದ್ದಾರೆ. ಅದಾದ ಬಳಿಕ ಕೇವಲ 10 ರಿಂದ 12 ದಿನಗಳಲ್ಲಿ ಹನುಮಂತಪ್ಪ ಆರೋಗ್ಯದಲ್ಲಿ ಏರುಪೇರಾಗಿದ್ದು, ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎಸ್ಡಿಎಂ ಆಸ್ಪತ್ರೆಗೆ ಹನುಮಂತಪ್ಪ ಶಿಫ್ಟ್ ಮಾಡಲಾಗಿತ್ತು. ಆದರೆ ಮಾತ್ರೆಯ ಅಡ್ಡಪರಿಣಾಮದಿಂದ ಚಿಕಿತ್ಸೆ ಫಲಿಸದೆ ಮೇ 24ರಂದು ಹನಮಂತಪ್ಪ ಸಾವನ್ನಪ್ಪಿದ್ದಾರೆ.