ಮಂಗಳೂರು: 2022ರ ಜುಲೈ ತಿಂಗಳಲ್ಲಿ ಸುಳ್ಯದ ಬೆಳ್ಳಾರೆಯ ಮೂಲದ ಯುವಕ ಮಸೂದ್ ನನ್ನು ಕೊಲೆ ಮಾಡಲಾಗಿದ್ದು, ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಇಬ್ಬರು ಆರೋಪಿಗಳಿಗೆ ಇದೀಗ ಹೈಕೋರ್ಟ್ ಜಾಮೀನು ನೀಡಿದೆ.
ಮಸೂದ್ ನನ್ನು ಬೆಳ್ಳಾರೆ ಸಮೀಪದ ಕಳೆಂಜ ಎಂಬಲ್ಲಿ ಕೊಲೆ ಮಾಡಲಾಗಿತ್ತು. ಇದೀಗ ಎಂಟು ಆರೋಪಿಗಳ ಪೈಕಿ ಅಭಿಲಾಷ್ ಮತ್ತು ಸುನಿಲ್ ಅವರಿಗೆ ಜಾಮೀನು ಲಭಿಸಿದೆ. ಉಳಿದ ಆರು ಮಂದಿಗೆ ಈ ಮೊದಲೇ ಜಾಮೀನು ಸಿಕ್ಕಿತ್ತು ಎನ್ನಲಾಗಿದೆ.
ಕರ್ನಾಟಕದ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ಜಸ್ಟಿಸ್ ವಿಶ್ವಜೀತ್ ಎಸ್ ಶೆಟ್ಟಿ ಜಾಮೀನು ಅರ್ಜಿಯನ್ನು ಪರಿಗಣಿಸಿ, ‘ಒಂದು ವರ್ಷದ ಮೇಲೆ ಆರೋಪಿಯಾಗಿ ಜೈಲಿನಲ್ಲಿದ್ದಾರೆಂಬ ವಾದಕ್ಕೆ ಪುರಸ್ಕರಿಸಿದ್ದಾರೆ. ಆರೋಪಿಗಳ ಪರವಾಗಿ ಹಿರಿಯ ವಕೀಲ ಅರುಣ್ ಶಾಮ್ ವಾದ ಮಂಡಿಸಿದ್ದರು. ವಕೀಲರಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿಸಿದ್ದರು. ಮಸೂದ್ ಕೊಲೆಗೆ ಪ್ರತೀಕಾರ ಎನ್ನುವಂತೆ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಎರಡೂ ಕೃತ್ಯಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷಕ್ಕೆ ಕಾರಣವಾಗಿತ್ತು,” ಎನ್ನಲಾಗಿದೆ.