ಪುತ್ತೂರು: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯನ್ನು ಇಲ್ಲೊಬ್ಬಳು ತನಗೆ ಬೇಕಾದಂತೆ ಚೆನ್ನಾಗಿಯೇ ಬಳಸಿಕೊಂಡಿದ್ದಾಳೆ.
ಹುಬ್ಬಳ್ಳಿಯಿಂದ ಸರ್ಕಾರಿ ಬಸ್ ನಲ್ಲಿ ಫ್ರೀಯಾಗಿ ಪುತ್ತೂರಿಗೆ ಬಂದು ಮಹಿಳೆ ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಾಳೆ. ಮಹಿಳೆ ತನ್ನ 11 ತಿಂಗಳ ಮಗವನ್ನು ಬಿಟ್ಟು ಪ್ರಿಯಕರನನ್ನ ನೋಡಲು ಪುತ್ತೂರಿಗೆ ಬಂದಿದ್ದಾಳೆ. ಈ ಹಿಂದೆಯೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಆದರೆ ಯುವತಿಗೆ ಬೇರೆ ಯುವಕನ ಜೊತೆ ಮದುವೆಯಾಗಿದ್ದು, ಮದುವೆಯಾದ ಬಳಿಕವೂ ತನ್ನ ಪ್ರಿಯಕರನ ಜೊತೆ ಒಡನಾಟದಲ್ಲಿದ್ದಳು ಎನ್ನಲಾಗಿದೆ.
ಪ್ರಿಯಕರ ಕೋಡಿಂಬಾಡಿ ಸಮೀಪದಲ್ಲಿ ತೋಟದ ಕೆಲಸ ಮಾಡುತ್ತಿದ್ದ. ಮಹಿಳೆ ತನ್ನ, ಗಂಡನಲ್ಲಿ ಆಧಾರ್ ಲಿಂಕ್ ಮಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಎಸ್ಕೇಪ್ ಆಗಿದ್ದಾಳೆ. ಬಳಿಕ, ಆಧಾರ್ ಕಾರ್ಡ್ ಬಳಸಿ ಬಸ್ಸಿನಲ್ಲಿ ಫ್ರೀಯಾಗಿ ಪುತ್ತೂರಿಗೆ ಬಂದಿದ್ದಾಳೆ. ಈ ಘಟನೆ ತಿಳಿದ ಎರಡೂ ಮನೆಯವರು ಮಹಿಳೆ ಹಾಗೂ ಆಕೆಯ ಪ್ರಿಯಕರನಿಗಾಗಿ ಹುಡುಕಾಟ ಮಾಡಿದ್ದಾರೆ.
ಇವರಿಬ್ಬರನ್ನ ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ಧೈರ್ಯ ಹೇಳಿದ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರ್, ಪುತ್ತೂರಿಗೆ ಬಂದು ಪ್ರಿಯಕರನ ಜೊತೆ ಪರಾರಿಯಾದ ಮಹಿಳೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಟವರ್ ಲೊಕೇಶನ್ ಮೂಲಕ ಪತ್ತೆ ಹಚ್ಚಿದಾಗ ಪುತ್ತೂರಿನಿಂದ ಸಿದ್ಧಕಟ್ಟೆಗೆ ಪರಾರಿಯಾದ ಬಗ್ಗೆ ಮಾಹಿತಿ ತಿಳಿದಿದೆ.