ಮಣಿಪಾಲ: ಸೆಕೆಂಡ್ ಹ್ಯಾಂಡ್ ಶಾಪ್ನಿಂದ ವ್ಯಕ್ತಿಯೊಬ್ಬ ಟೆಸ್ಟ್ ರೈಡ್ ಗಾಗಿ ತೆಗೆದುಕೊಂಡು ಹೋದ ಬೈಕ್ನೊಂದಿಗೆ ಪರಾರಿಯಾಗಿರುವ ಘಟನೆ ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿರುವ ನ್ಯೂ ಮಣಿಪಾಲ್ ಬಜಾರ್ ಬೈಕ್ ಶಾಪ್ ನಲ್ಲಿ ನಡೆದಿದೆ.
ಹೆರ್ಗ ತ್ರಿಶಂಕು ನಗರದ ಪ್ರಶಾಂತ್ ಕುಮಾರ್ ಎಂಬವರು ವಾಹನ ಸೇಲ್ ಮತ್ತು ಖರೀದಿ ವ್ಯವಹಾರವನ್ನು ಮಾಡಿಕೊಂಡಿದ್ದ ನ್ಯೂ ಮಣಿಪಾಲ್ ಬಜಾರ್ ಶಾಪ್ಗೆ ಅ.31ರಂದು ಮಧ್ಯಾಹ್ನ ವೇಳೆ ಗಣೇಶ್ ಉದ್ಯಾವರ ಎಂಬ ಹೆಸರು ಹೇಳಿಕೊಂಡು ಬಂದ ವ್ಯಕ್ತಿ, ಹಳೆಯ ದ್ವಿಚಕ್ರ ವಾಹನ ಬೇಕೆಂದು ಕೇಳಿದ್ದನು. ಅದರಂತೆ ಪ್ರಶಾಂತ್ ಕುಮಾರ್, ಆತನಿಗೆ ಪಾವಂಜೆಯ ನಾಸಿರ್ ಹುಸೈನ್ ಎಂಬವರು ಮಾರಾಟ ಮಾಡಲು ನೀಡಿದ್ದ ಕೆಎ-19-ಇಯು- 6827 ನಂಬರಿನ ಟಿವಿಎಸ್ ವಿಕ್ಟರ್ ಬೈಕ್ನ್ನು ಟೆಸ್ಟ್ ರೈಡ್ ಗೆ ನೀಡಿದ್ದರು. ಒಂದು ರೌಂಡ್ ಹೋಗಿ ಬರ್ತಿನಿ ಎಂದು ಅಕ್ಟೋಬರ್ 31 ರಂದು ಹೋದ ವ್ಯಕ್ತಿ ಈವರೆಗೂ ಪತ್ತೆಯಾಗಿಲ್ಲ.
ಗ್ರಾಹಕರ ಸೋಗಿನಲ್ಲಿ ಬಂದ ಗಣೇಶ್ ಉದ್ಯಾವರ ಬೈಕ್ ನ್ನು ವಾಪಾಸ್ ನೀಡದ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.