ಉಳ್ಳಾಲ: ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ -66ರ ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಪಜೀರು ಸೇನೆರೆಬೈಲು ಸಂಜೀವ ಪೂಜಾರಿ ಎಂಬವರ ಪುತ್ರ ಶ್ಯಾಮಪ್ರಸಾದ್ (45) ಸಾವನ್ನಪ್ಪಿದವರು.
ಇವರು ಬೆಳಗ್ಗೆ ಮನೆ ಸಮೀಪದ ಬಾಡಿಗೆ ದೊರಕಿತೆಂದು ಮನೆಯಲ್ಲಿ ತಿಳಿಸಿ ಮಂಗಳೂರಿಗೆ ತೆರಳಿದ್ದರು. ಅಲ್ಲಿಂದ ವಾಪಸ್ಸಾಗುವ ಸಂದರ್ಭ ಕಾರು ಢಿಕ್ಕಿ ಹೊಡೆದಿದೆ. ಪಡೀಲ್ ಕಣ್ಣೂರಿನಿಂದ ತಲಪಾಡಿ ಶಾರದಾ ವಿದ್ಯಾ ಸಂಸ್ಥೆಗೆ ಸಹೋದರನನ್ನು ಬಿಡಲು ಬರುತ್ತಿದ್ದ ಕಾರು ಚಾಲಕ ರಿಕ್ಷಾಗೆ ಢಿಕ್ಕಿ ಹೊಡೆದಿದ್ದಾನೆ. ರಿಕ್ಷಾದ ಹಿಂಬದಿಗೆ ಕಾರು ಢಿಕ್ಕಿ ಹೊಡೆಯುತ್ತಿದ್ದಂತೆ , ಸೇತುವೆಯ ಬದಿಯಲ್ಲಿ ಅಳವಡಿಸಿದ ಗಿಂಡಿಗೆ ರಿಕ್ಷಾ ತಗಲಿ ಚಾಲಕ ಹೊರಗೆಸೆಯಲ್ಪಟ್ಟು, ಅವರ ಮೇಲೆ ಕಾರು ಚಲಿಸಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ಜಮಾಯಿಸಿದ ಉದ್ರಿಕ್ತರು ಕಾರು ಚಾಲಕನಿಗೆ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಗುಂಪನ್ನು ಚದುರಿಸಿ ಆಟೋ ರಿಕ್ಷಾ ಚಾಲಕನ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಕೇರಳ ನೋಂದಣಿಯ ಕಾರು ಇದಾಗಿದ್ದು ಟೆಂಪೋಗೆ ಬಡಿದು ಆಟೋ ರಿಕ್ಷಾಗೆ ಡಿಕ್ಕಿಯಾಗಿದೆ. ಎಡದ ಬದಿಯಲ್ಲೇ ಇದ್ದ ರಿಕ್ಷಾ ಡಿಕ್ಕಿಯ ರಭಸಕ್ಕೆ ಸೇತುವೆಯ ಅಂಚಿಗೆ ಸಿಲುಕಿದ್ದು ನಜ್ಜುಗುಜ್ಜಾಗಿದೆ.
ಅಸೈಗೋಳಿ ರಿಕ್ಷಾ ಪಾರ್ಕಿನಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಶ್ಯಾಮಪ್ರಸಾದ್ ಕುಟುಂಬದ ಆಧಾರಸ್ತಂಭವಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.