ಮಂಗಳೂರು: ಮಹಿಳಾ ಸುರಕ್ಷೆತೆಗೆ ಒತ್ತು ನೀಡುವ ದೃಷ್ಟಿಯಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ ‘ಮಹಿಳಾ ಸುರಕ್ಷತೆಗಾಗಿ ಒಂದು ದಿನ’- ‘112ಕ್ಕೆ ಕರೆ ನಿಮ್ಮಿಂದ-ನೀವಿರುವಲ್ಲಿಗೆ ಭೇಟಿ ನಮ್ಮಿಂದ’ ಎಂಬ ಪರಿಕಲ್ಪನೆಯಲ್ಲಿ ಆಂದೋಲನ ಮಾದರಿಯ ಕಾರ್ಯಕ್ರಮ ನಡೆಯಲಿದೆ.
112 ಸಂಖ್ಯೆಗೆ ಯಾರಾದರೂ ಕರೆ ಮಾಡಿದ್ದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ಪಿಎಸ್ಐಗೆ ಮೇಲ್ಪಟ್ಟ ಅಧಿಕಾರಿಗಳು ಅಂದರೆ ಕಮಿಷನರ್ ಆಫ್ ಪೊಲೀಸ್ ಸೇರಿದಂತೆ ಡಿಸಿಪಿ, ಎಸಿಪಿ, ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್ ಸೇರಿದಂತೆ ಅವರದ್ದೇ ಪ್ರತ್ಯೇಕ ತಂಡ ಸ್ಥಳಕ್ಕೆ ಧಾವಿಸಿ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ನಡೆಸಲಾಗುತ್ತದೆ. ಈ ಕಾರ್ಯಕ್ರಮ ಮುಖ್ಯವಾಗಿ ಮಹಿಳಾ ಸುರಕ್ಷತೆಗಾಗಿ ಆಯೋಜನೆ ಮಾಡಲಾಗಿದೆ.
ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಒಲಿಂಪಿಯನ್ ಎಂ.ಆರ್. ಪೂವಮ್ಮ ಭಾಗವಹಿಸಲಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.
ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು, ಹಿರಿಯ ನಾಗರಿಕರು ಯಾರೇ ಕರೆ ಮಾಡಿದರು ನಾವು ಕೂಡಲೇ ಸ್ಪಂದಿಸುತ್ತೇವೆ. ನಿಮ್ಮ ಸ್ಥಳದ ವಿವರ ತಿಳಿಸಿದರೆ ಕೂಡಲೇ ಮನೆಗೆ ಬಂದು ಚರ್ಚೆ ನಡೆಸಲಾಗುವುದು. ಶನಿವಾರ ವೀಕೆಂಡ್ ಕರ್ಫ್ಯೂ ಇದ್ದರೂ ನಿಮ್ಮ ಸಮಸ್ಯೆ ಹೇಳಲು ಅಡ್ಡಿ ಇಲ್ಲ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎಂದಿದ್ದಾರೆ.
ಮಹಿಳೆಯರು ನಗರದಲ್ಲಿ ಹೆಚ್ಚು ಸುರಕ್ಷಿತವಾಗಿ ಇರುವಂತೆ ಮಾಡಲು ಇದು ಸಣ್ಣ ಪ್ರಯತ್ನ. ಈ ಪ್ರಯತ್ನಕ್ಕೆ ಕಮಿಷನರೇಟ್ ವ್ಯಾಪ್ತಿಯ ಎಲ್ಲ ನಾಗರಿಕರು ಸಹಕಾರ ನೀಡಿ, ನಿಮ್ಮ ಅಕ್ಕಪಕ್ಕದಲ್ಲೂ ಈ ಸಮಸ್ಯೆ ಇದ್ದರೂ ಗಮನಕ್ಕೆ ತರಬಹುದು. ಚರ್ಚಿತ ವಿಚಾರವನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ತಿಳಿಸಿದ್ದಾರೆ.
ನಾನೂ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಪೊಲೀಸ ತಂಡ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮಹಿಳೆಯರ ಸಮಸ್ಯೆಗಳಿಗೆ ಇಆರ್ಎಸ್ಎಸ್ ಹಾಗೂ ಸರಕಾರಿ ವಾಹನಗಳಲ್ಲಿ ತಕ್ಷಣ ಅವರಿರುವ ಸ್ಥಳಕ್ಕೆ ಧಾವಿಸಲಿದೆ. ಮಂಗಳೂರನ್ನು ಸುರಕ್ಷಿತವಾಗಿಡಲು, ಮಹಿಳೆಯರ ಸುರಕ್ಷತೆಗಾಗಿ ಇದೊಂದು ಸಣ್ಣ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಶಿಕುಮಾರ್ ಎನ್. ಹೇಳಿದರು.