ಉಡುಪಿ ; ಮಂಗಳೂರಿಗೆ ಬಾಡಿಗೆಗೆ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಣಿಕಂಠ (36) ನಾಪತ್ತೆಯಾದವರು. ಈ ಬಗ್ಗೆ ಮಣಿಕಂಠ ಅವರ ಪತ್ನಿ ಪವಿತ್ರ ಶೆಟ್ಟಿ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಿನಾಂಕ ಫೆಬ್ರವರಿ 24 ರಂದು ರಾತ್ರಿ 9:30 ಗಂಟೆ ಸುಮಾರಿಗೆ ನನ್ನ ಗಂಡ ಮಣಿಕಂಠ (36) ರವರಿಗೆ ಮಲ್ಲಾರು ಗ್ರಾಮದ ನಿವಾಸಿ ಜಾಕೀರ್ ಎಂಬುವವರು ಕರೆ ಮಾಡಿ “ಮಂಗಳೂರಿಗೆ ಬಾಡಿಗೆ ಇದೆ” ಎಂದು ತಿಳಿಸಿದ ಹಿನ್ನೆಲೆಯಲ್ಲಿ, ಮಣಿಕಂಠ ಅವರು KA-19-MR-5180 ನಂಬರಿನ ಗ್ಲಾಂಜಾ ಕಾರಿನಲ್ಲಿ ತೆರಳಿದ್ದಾರೆ. ಅದೇ ದಿನ ರಾತ್ರಿ 11:15 ಗಂಟೆ ಸುಮಾರಿಗೆ ಪವಿತ್ರ ಶೆಟ್ಟಿ ಅವರು ಕರೆ ಮಾಡಿದಾಗ, ಮಣಿಕಂಠ ಅವರು “ನಾನು ಜಾಕೀರ್ ಜೊತೆ ಮಂಗಳೂರಿಗೆ ಹೋಗುತ್ತಿದ್ದೇನೆ, ಬರಲು ತಡವಾಗುತ್ತದೆ” ಎಂದು ತಿಳಿಸಿದ್ದಾರೆ.
ಆದರೆ ಮರುದಿನದಿಂದ ಮಣಿಕಂಠ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗದೆ ಇರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಜಾಕೀರ್ ಅವರ ಬಾವ ಜಿಯಾವುದ್ದೀನ್ ಅವರನ್ನು ಸಂಪರ್ಕಿಸಿದಾಗ, ಜಾಕೀರ್ ಕೂಡ ಮನೆಗೆ ಬಂದಿಲ್ಲ ಎಂದು ತಿಳಿದುಬಂದಿದೆ.ಉಚ್ಚಿಲ ಹಾಗೂ ಪಡುಬಿದ್ರಿ ಭಾಗಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿಲ್ಲವೆಂದು ತಿಳಿದುಬಂದಿದೆ.ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಸಂಬಂಧಿಸಿದವರ ಕುರಿತು ಮಾಹಿತಿ ಹೊಂದಿರುವವರು ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.


