ಉಡುಪಿ: ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟು ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.
ನೇಜಾರು ನಿಡಂಬಳ್ಳಿ ನಿವಾಸಿ ಪ್ರವೀಣ್ ಬೆಳ್ಚಡ (44) ಕಾಣೆಯಾದ ವ್ಯಕ್ತಿ. ಅಕ್ಟೋಬರ್ 18 ರಂದು ಪ್ರವೀಣ್ ಮನೆ ಬಿಟ್ಟು ತೆರಳಿದ್ದು ಬಳಿಕ ಹಿಂತಿರುಗಲಿಲ್ಲ. ಆರು ವರ್ಷಗಳ ಹಿಂದೆ ಪ್ರವೀಣ್ ಅವರು ಸಂಧ್ಯಾ ಎಂಬವರನ್ನು ಮದುವೆಯಾಗಿದ್ದು, ದಂಪತಿ ನಡುವೆ ಕೌಟುಂಬಿಕ ಮನಸ್ತಾಪವಿತ್ತು. ಹೀಗಾಗಿ ಅವರ ಪತ್ನಿ ಮತ್ತು ಮಗು ತಾಯಿಯ ಮನೆಯಲ್ಲಿ ವಾಸವಿದ್ದಾರೆ.
ಪ್ರವೀಣ್ ಊಟ-ತಿಂಡಿಗೆ ಸಂಬಂಧಿ ಪ್ರಕಾಶ್ ಅವರ ಮನೆಗೆ ಹೋಗಿ ಬರುತ್ತಿದ್ದರು. ಪ್ರವೀಣ್ ಅವರ ಮೊಬೈಲ್ ಸ್ವಿಚ್ಅಫ್ ಆಗಿತ್ತು. ಅವರು ಮನಗೆ ಬೀಗ ಹಾಕಿ ಕೀಯನ್ನು ಮನೆಯ ಹೊರಗಿಟ್ಟು ಹೋಗಿದ್ದರು ಎಂದು ಮಾರನೇ ದಿನ ನೆರೆಮನೆಯವರು ತಿಳಿಸಿದ್ದಾರೆ. ಸಂಬಂಧಿಕರು ಮನೆಯ ಬಾಗಿಲು ತೆರೆದು ಒಳಗೆ ನೋಡಿದಾಗ ಟಿಪಾಯಿ ಮೇಲೆ ಕಾಗದದಲ್ಲಿ “ನನ್ನ ಸಾವಿಗೆ ನಾನೇ ಕಾರಣ’ ಎಂದು ಚೀಟಿಯನ್ನು ಬರೆದಿರುವುದು ಪತ್ತೆಯಾಗಿದೆ.
ಪ್ರವೀಣ್ 5.6 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದಾರೆ. ಸಾರ್ವಜನಿಕರಿಗೆ ಅವರ ಕುರಿತು ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.