ವಿಟ್ಲ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣ ವಿಟ್ಲ ಕಸಬ ಗ್ರಾಮದ ದಾಸರಬೆಟ್ಟು ಎಂಬಲ್ಲಿ ನಡೆದಿದೆ. ದಾಸರಬೆಟ್ಟು ನಿವಾಸಿ ಇಬ್ರಾಹಿಂ ಮೃತ ದುರ್ದೈವಿ.
ಇಬ್ರಾಹಿಂ ಮತ್ತು ಅವರ ಅಣ್ಣ ದಿ. ಮಮ್ಮದೆ ಬ್ಯಾರಿರವರ ಮಕ್ಕಳಾದ ಸುಲೈಮಾನ್, ಅಬೂಬಕ್ಕರ್ ಹಾಗೂ ಹಸೈನಾರ್ ರವರಿಗೆ ಜಮೀನಿಗೆ ಸಂಬಂದಧಿಸಿದಂತೆ ಗಲಾಟೆ ನಡೆಯುತ್ತಿದ್ದು, ಬಳಿಕ ರಾಜಿ ಸಂಧಾನದಲ್ಲಿ ಮುಕ್ತಾಯಗೊಂಡಿದ್ದು, ಮಮ್ಮದೆ ಬ್ಯಾರಿರವರ ಜಮೀನು ನೋಂದಣಿಗೆ ಬಾಕಿ ಇದ್ದು, ಅವರ ಮಕ್ಕಳು ಈ ಬಗ್ಗೆ ತಕರಾರು ಮಾಡುತ್ತಿದ್ದು ಫೆಬ್ರವರಿ 21ರಂದು ಇಬ್ರಾಹಿಂ ಬೆಳಗ್ಗೆ ತೋಟಕ್ಕೆ ಹೋದಾಗ ಆರೋಪಿಗಳಾದ ಸುಲೈಮಾನ್, ಅಬೂಬಕ್ಕರ್ ಹಸೈನಾರ್ ಹಾಗೂ ನೆರೆಯ ನಾಸೀರ್ ಅವರು ಜಮೀನು ವಿಚಾರದಲ್ಲಿ ಗಲಾಟೆ ನಡೆಸಿದ್ದರು. ಈ ಸಂದರ್ಭ ಆರೋಪಿಗಳು ತೋಟದಲ್ಲಿದ್ದ ಕಲ್ಲುಗಳನ್ನು ಹಾಗೂ ಮರದ ತುಂಡೊಂದನ್ನು ಹೆಕ್ಕಿಕೊಂಡು ಇಬ್ರಾಹಿಂ ಅವರ ಕಡೆ ಎಸೆದಾಗ ಮರದ ತುಂಡು ಅವರ ತಲೆಯ ಬಲಭಾಗಕ್ಕೆ ತಾಗಿ ತಲೆಯ ಒಳಭಾಗಕ್ಕೆ ಗಂಭೀರ ಗಾಯವಾಗಿ ಕುಸಿದ ಬಿದ್ದಿದ್ದಾರೆ. ಇದನ್ನು ನೋಡಿದ ಇಬ್ರಾಹಿಂ ಅವರ ಮಗ ಅಬ್ದುಲ್ ಲತೀಫ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಅದರಂತೆ ಸುಲೈಮಾನ್, ಅಬೂಬಕ್ಕರ್, ಹಸೈನಾರ್, ನಾಸೀರ್ ಪೊಲೀಸರು ಬಂಧಿಸಿದ್ದಾರೆ. ಅವರ ಪೈಕಿ ಸುಲೈಮಾನ್ ಮತ್ತು ನಾಸೀರ್ ಎಂಬವರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದು, ಜೈಲಿನಲ್ಲಿದ್ದಾರೆ.