ಮೂಡಬಿದರೆ: ಬೈಕ್ ಗಳ ನಡುವೆ ಪರಸ್ಪರ ಅಪಘಾತ ಸಂಭವಿಸಿ ಬೆಳ್ತಂಗಡಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೂಡುಬಿದಿರೆ ಸಮೀಪದ ಕೊಡಂಗಲ್ಲುವಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಪೆರಿಂಜೆ ಸಮೀಪದ ಎದುರುಗುಡ್ಡೆ ನಿವಾಸಿ ರವೀಂದ್ರ ಪೂಜಾರಿ (35) ಎಂಬವರು ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನದ ಹಿಂಬದಿಯಲ್ಲಿದ್ದ ಅವರ ಸಹೋದರ ರಾಜೇಂದ್ರ ಪೂಜಾರಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವೀಂದ್ರ ಅವರು ಮೂಡುಬಿದಿರೆ ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಸಹೋದರನೊಂದಿಗೆ ತೆರಳುತ್ತಿದ್ದ ವೇಳೆ ಕೊಡಂಗಲ್ಲು ಸಮೀಪ ಎದುರುಗಡೆಯಿಂದ ಬಂದ ಇಂಜಿನಿಯರಿಂಗ್ ವಿದ್ಯಾರ್ಥಿ ಜಸ್ಟಿನ್ ಮಿನೇಝಸ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸಾವಿನಲ್ಲೂ ಸಾರ್ಥಕತೆ:
ಇನ್ನು ರವೀಂದ್ರ ಪೂಜಾರಿಯವರ ಅಗಲಿಕೆಯ ನೋವಿನಲ್ಲೂ ಅವರು ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ. ಅವರ ಕಣ್ಣುಗಳನ್ನು ಮನೆಯವರು ಸ್ವಇಚ್ಛೆಯಿಂದ ದಾನ ಮಾಡಲು ನಿರ್ಧರಿಸಿದ್ದು, ಈ ಮೂಲಕ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.


