ವಿಜಯನಗರ:ಮದುವೆಗೆ ಹುಡುಗಿ ಫಿಕ್ಸ್ ಆಗಿದ್ದರೂ ಮನೆಯವರು ಮದುವೆಯನ್ನು ತಡ ಮಾಡಿದ್ದರಿಂದ ಸಿಟ್ಟುಗೊಂಡ ಯುವಕ ಇದನ್ನು ಪ್ರತಿಭಟಿಸಲು ಮೊಬೈಲ್ ಟವರ್ ಏರಿ ಕೂತ ವಿಚಿತ್ರ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ.ಚಿರಂಜೀವಿ ಎಂಬ 23 ವರ್ಷದ ಯುವಕನೇ ಈ ದುಸ್ಸಾಹಸಕ್ಕಿಳಿದವನು. ಚಿರಂಜೀವಿಗೆ ಅವನ ಪೋಷಕರು ಮದುವೆಗೆ ಹುಡುಗಿಯನ್ನು ನೋಡಿ ಮಾತುಕತೆ ಕೂಡ ಮುಗಿಸಿದ್ದಾರೆ. ಆದರೆ ಅವನ ಮದುವೆ ಮಾಡಿರಲಿಲ್ಲ. ಕಾರಣ ಇಬ್ಬರು ಗಂಡು ಮಕ್ಕಳು ಇದ್ದು ಚಿರಂಜೀವಿಗಿಂತ ಹಿರಿಯವನಿಗೆ ಮದುವೆ ಆಗಿರಲಿಲ್ಲ. ಹಾಗಾಗಿ ಮೊದಲು ಹಿರಿಯವನಿಗೆ ಮದುವೆ ಆದ ಮೇಲೆ ಇವನ ಮದುವೆ ಮಾಡಲು ಮನೆಯವರು ತೀರ್ಮಾನಿಸಿದ್ದರು.ಆದರೆ ಇದನ್ನು ಒಪ್ಪದ ಚಿರಂಜೀವಿ ಮದುವೆ ಗೊತ್ತು ಮಾಡಿದ್ದೀರಿ, ಮದುವೆ ಯಾಕೆ ತಡ ಮಾಡುತ್ತೀರಿ ಎಂದು ಸಿಟ್ಟು ಮಾಡಿಕೊಂಡು ಸೀದಾ ಮೊಬೈಲ್ ಟವರ್ ಏರಿದ್ದಾನೆ.
ಸ್ಥಳಕ್ಕೆ ಪೋಲಿಸರು ಆಗಮಿಸಿ ಅವನಿಗೆ ಬುದ್ಧಿವಾದ ಹೇಳಿ ಅವನ ಮನವೊಲಿಸಿದ್ದಾರೆ. ತಾನು ಇಳಿದರೆ ಯಾರೂ ಹೊಡೆಯಬಾರದು ಎಂಬ ಷರತ್ತು ವಿಧಿಸಿ ಆತ ಕೆಳಕ್ಕೆ ಇಳಿದಿದ್ದಾನೆ. ಈ ಹಿಂದೆಯೂ ಆತ ಇದೇ ವಿಷಯಕ್ಕೆ ಮನೆಯಲ್ಲಿ ಜಗಳವಾಡುತ್ತಿದ್ದನಂತೆ.