ಮಂಗಳೂರು: ಮಾಟ-ಮಂತ್ರ, ವಶೀಕರಣದ ಮೂಲಕ ಕನ್ಯಾನದ ಹಿಂದೂ ಹುಡುಗಿ ಹತ್ಯೆ ಮಾಡಲಾಗಿದೆಯಾ ಅನ್ನೋ ಸುದ್ದಿಯೊಂದು ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ಪೋಷಕರು ನೀಡಿದ ಸ್ಪೋಟಕ ಹೇಳಿಕೆ ಕನ್ಯಾನದ ಹಿಂದೂ ಹುಡುಗಿ ಆತ್ಮಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ನೀಡಿದೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಮೇ.4ರಂದು ನೇಣಿಗೆ ಶರಣಾಗಿದ್ದ 14 ವರ್ಷದ ಆತ್ಮೀಕಾಳದ್ದು ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದು ಆಕೆಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಆತ್ಮೀಕಾ ತಂದೆ ಸಂಜೀವ ಮತ್ತು ಗೀತಾ ಕೆಲ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನಮ್ಮ ಮಗಳನ್ನ ಕೊಲೆ ಮಾಡಿದ್ದಾರೆ, ಶಾಹುಲ್ ಹಮೀದ್(ಕುಟ್ಟ) ಕೊಲೆ ಮಾಡಿದ್ದಾನೆ. ಅವಳ ಕಾಲು ನೆಲಕ್ಕೆ ತಾಗುತ್ತಿತ್ತು, ಅದನ್ನೆಲ್ಲಾ ನೋಡಿದ್ರೆ ಇದೊಂದು ಕೊಲೆ. ಬಟ್ಟೆ ತೊಳೆಯಲು ಸಿದ್ದತೆ ಮಾಡಿದ್ದ ಮಗಳು ಯಾಕೆ ಆತ್ಮಹತ್ಯೆ ಮಾಡ್ತಾಳೆ? ಅವನು ಲವ್ ಮಾಡು ಅಂತ ಕಿರುಕುಳ ಕೊಟ್ಟಿದ್ದಾನೆ, ಅದಕ್ಕೆ ಮಗಳು ಒಪ್ಪಲಿಲ್ಲ. ಅವನು ಮಾಡಿದ ವಾಮಾಚಾರ ಎಲ್ಲವನ್ನೂ ನಾವು ಬಿಡಿಸಿದ್ದೆವು. ಅದಕ್ಕೆ ಮೊದಲು ನನಗೆ ಅವನೇ ಬೇಕು ಅಂತ ಮಗಳು ಹೇಳ್ತಾ ಇದ್ದಳು. ಆಗ ಅವನು ಇವಳಿಗೆ ವಾಮಾಚಾರ ಮಾಡಿದ ಅನುಮಾನ ಇತ್ತು. ಹೀಗಾಗಿ ವಾಮಾಚಾರ ಬಿಡಿಸಲು ಮಂತ್ರವಾದಿ ಬಳಿಗೆ ಹೋಗಿದ್ದೆವು. ಅಲ್ಲಿ ಸರಿಯಾಗದ ಕಾರಣ ಕಾಣಿಯೂರು ಸ್ವಾಮೀಜಿ ಬಳಿ ಹೋಗಿದ್ದೆ. ಅವರು ಎಲ್ಲವನ್ನೂ ಸರಿ ಮಾಡಿ, ವಾಮಾಚಾರ ಕಳೆದು ಕಳುಹಿಸಿದ್ದರು. ಆ ನಂತರ ಅವಳು ಒಂದೊಂದನ್ನೇ ಹೇಳಲು ಶುರು ಮಾಡಿದ್ದಳು. ಅವನು ನನ್ನ ಕೂದಲು ತೆಗೆದುಕೊಂಡು ಹೋಗಿದ್ದಾನೆ ಅಂತ ಮಗಳು ಹೇಳಿದ್ದಳು. ಅಲ್ಲದೇ ಅಯ್ಯಪ್ಪನ ಪ್ರಸಾದ ಅಂತ ಏನೋ ಪ್ರಸಾದ ಕೊಟ್ಡಿದ್ದನಂತೆ. ಬುರ್ಖಾ ಹಾಕಿಯೂ ನಾವಿರದಾಗ ಮನೆಯಿಂದ ಕರೆದುಕೊಂಡು ಹೋಗಿದ್ದಾಗಿ ನನ್ನ ಬಳಿ ಹೇಳಿದ್ದಳು ಅಂದಿದ್ದಾರೆ.
ಹಾಗೇ ಸಾಯುವ ಎರಡು ವಾರಗಳ ಮೊದಲು ಇದನ್ನೆಲ್ಲ ಮಗಳು ನಮ್ಮ ಬಳಿ ಹೇಳಿದ್ದಾಳೆ. ಶಾಹುಲ್ ಹಮೀದ್ ನನ್ನ ಬಿಡ ಬೇಡಿ, ಅವನನ್ನ ಕೊಲೆ ಮಾಡಿ ಅಂದಿದ್ದಳು. ನನ್ನ ಮಗಳು ಬೆಂಕಿಯಲ್ಲಿ ಹೊತ್ತಿದಾಗೇ ಅವನು ಕೂಡ ಹೊತ್ತಬೇಕು. ಅವನು ಸತ್ತರೆ ಮತ್ತಷ್ಟು ಹೆಣ್ಣು ಮಕ್ಕಳ ಬದುಕು ಸರಿ ಆಗುತ್ತೆ ಎಂದು ಆತ್ಮಿಕಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.