ಚಿಕ್ಕಮಗಳೂರು : ಮೇ 3 ರಂದು ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರೊಂದು ಮಧ್ಯರಾತ್ರಿ ಅಪಘಾತವಾಗಿತ್ತು. ಕಾರಿನಲ್ಲಿದ್ದವರು ಸಹಾಯ ಬಯಸುತ್ತಿದ್ರೆ ಅದೇ ಮಾರ್ಗದಲ್ಲಿ ಬೈಕಿನಲ್ಲಿ ಬರುತ್ತಿದ್ದವರು ಸಹಾಯ ಮಾಡುವ ನೆಪದಲ್ಲಿ ಅವರನ್ನ ಹೆದರಿಸಿ ಹಣ, ಉಂಗುರ, ಚೈನ್ ಹಾಗೂ ಮೊಬೈಲ್ ದೋಚಿದ್ರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಈ ಘಟನೆ ನಡೆದಿತ್ತು.
ಅಂದು ಅಪಘಾತವಾಗಿದ್ದ ಕಾರ್ ಸುತ್ತ ಎರಡು ಬೈಕ್ ಮತ್ತು 5 ಜನ ಯುವಕರು ಇದ್ರು. ಇದನ್ನು ನೋಡಿ ಅನುಮಾನಗೊಂಡು ತರಕಾರಿ ಗಾಡಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು 3 ಠಾಣೆಗೂ ಮಾಹಿತಿ ನೀಡಿ ನಾಖಾಬಂಧಿ ಹಾಕಿ ದರೋಡೆಕೋರರನ್ನ ಹಿಡಿದಿದ್ದಾರೆ.
ದರೋಡೆಯಾದ 24 ಗಂಟೆಯಲ್ಲಿ ಕಾಫಿನಾಡ ಖಾಕಿಗಳು ದರೋಡೆಕೋರರನ್ನ ಬಂಧಿಸಿದ್ದಾರೆ. ಇದೀಗ ಮಾಹಿತಿ ಕೊಟ್ಟವರ ಬಗ್ಗೆ ಹುಡುಕಾಟ ಶುರುವಾಗಿದೆ. ದಾರಿಹೋಕ ತೋರಿದ ಅದೊಂದು ಅನುಮಾನ ತಕ್ಕಮಟ್ಟಿಗೆ ಭವಿಷ್ಯದ ದರೋಡೆಯನ್ನೂ ತಡೆದಿದೆ. ಹಾಗಾಗಿ, ಕಾಫಿನಾಡ ಪೊಲೀಸರು ಅವನಿಗೊಂದು ರಿವಾರ್ಡ್ ನೀಡಲು ಹುಡುಕುತ್ತಿದ್ದಾರೆ. ಆದರೆ, ಆತ ಯಾರೆಂದು ಪತ್ತೆಯಾಗಿಲ್ಲ. ಅವನು ಮಾಹಿತಿ ನೀಡಿದ ಕೂಡಲೇ ಅಲರ್ಟ್ ಆದ ಪೊಲೀಸರು ಆತನ ಮಾಹಿತಿಯನ್ನೂ ಪಡೆದಿಲ್ಲ. ಹಾಗಾಗಿ, ಇದೀಗ ಆ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಇನ್ನು ಚಾರ್ಮಾಡಿ ನಿರ್ಜನ ಪ್ರದೇಶ. ಕರೆಂಟ್ ಇಲ್ಲ. ನೆಟ್ವರ್ಕ್ ಇಲ್ಲ. ಮಧ್ಯರಾತ್ರಿ ಸಹಾಯಕ್ಕೆ ಬರುವವರು ಕೂಡ ಕಡಿಮೆ. ಪೊಲೀಸ್ ಹಾಗೂ 112 ನಿರಂತರ ಗಸ್ತು ತಿರುಗುತ್ತಿದ್ದರು ಇಂತಹಾ ಪ್ರಕರಣ ನಡೆಯುತ್ತವೆ. ಈಗಾಗಲೇ ಮೂರ್ನಾಲ್ಕು ನಡೆದಿವೆ. ಹಾಗಾಗಿ, ಇನ್ಮುಂದೆ ಹೀಗೆ ಆಗಬಾರದು. ಬಣಕಲ್ನಿಂದ ಚಿಕ್ಕಮಗಳೂರು ಗಡಿಯ ಅಣ್ಣಪ್ಪ ಸ್ವಾಮಿ ದೇಗುಲದವರೆಗೂ ಇನ್ಮುಂದೆ ಮತ್ತಷ್ಟು ಅಲರ್ಟ್ ಆಗಿ ಇರುತ್ತೇವೆ ಅಂತ ಎಸ್ಪಿ ಅಕ್ಷಯ್ ತಿಳಿಸಿದ್ದಾರೆ.