ನಾಂದೇಡ್: ಮಹಾರಾಷ್ಟ್ರದ ನಾಂದೇಡ್ನಲ್ಲಿರೋ ಆಶ್ರಮದಲ್ಲಿ ಕರ್ನಾಟಕ ಮೂಲದ ಸ್ವಾಮೀಜಿಯೊಬ್ಬರನ್ನ ಹತ್ಯೆ ಮಾಡಲಾಗಿದೆ. ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜ್ ಕೊಲೆಯಾದ ಸ್ವಾಮೀಜಿ. ಸಾಧು ಕೊಲೆ ನಡೆದ ಆಶ್ರಮದ ಶೌಚಾಲಯದಲ್ಲಿ ಮತ್ತೊಬ್ಬ ವ್ಯಕ್ತಿಯೂ ಹತ್ಯೆಗೀಡಾಗಿದ್ದಾನೆ.

ಇಂದು ಮುಂಜಾನೆ 3.30ರ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪಾಲ್ಘಡ್ ಜಿಲ್ಲೆಯಲ್ಲಿ ಮೂವರು ಸ್ವಾಮೀಜಿಗಳ ಕೊಲೆಯಾದ ಬೆನ್ನಲ್ಲೇ ಈ ಘಟನೆ ನಡೆದಿರೋದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು, ಅವರನ್ನ ಗುರುತಿಸಲಾಗಿದೆ, ಶೋಧ ಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
‘ಕೊಲೆಯಾದ ಸಾಧು ಮತ್ತು ಆರೋಪಿಗಳಿಬ್ಬರೂ ಒಂದೇ ಸಮುದಾಯದವರು. ಪ್ರಕರಣಕ್ಕೆ ಧರ್ಮದ ಹಿನ್ನೆಲೆ ಇಲ್ಲ. ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ,’ ಎಂದು ಎಸ್ಪಿ ವಿಜಯ್ ಕುಮಾರ್ ಮಾಗರ್ ತಿಳಿಸಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ‘ಯುವಕನೊಬ್ಬ ಆಶ್ರಮದಲ್ಲಿ ಲೂಟಿ ಮಾಡುವ ವೇಳೆ ಎರಡೂ ಹತ್ಯೆಗಳನ್ನು ನಡೆಸಿದ್ದಾನೆ,’ ಎಂದು ಮಹಾರಾಷ್ಟ್ರದ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಇನ್ನು ಏಪ್ರಿಲ್ 16ರಂದು ಪಾಲ್ಘಡ್ ಜಿಲ್ಲೆಯ ಗಡ್ಚಿಂಚ್ಲೇನಲ್ಲಿ ಮೂವರು ಸಾಧುಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಜನರ ಗುಂಪು ಅವರ ಮೇಲೆ ಕಲ್ಲು ತೂರಾಟ ನಡೆಸಿ, ದೊಣ್ಣೆಗಳಿಂದ ಹೊಡೆದು ಹತ್ಯೆ ಮಾಡಿದ್ದರು. ಸದ್ಯೆ ಆ ಹತ್ಯೆಗೆ ಸಂಬಂಧಿಸಿದಂತೆ ಸುಮಾರು 105 ಜನರ ಮೇಲೆ ಪ್ರಕರಣ ದಾಖಿಸಲಾಗಿದ್ದು, ತನಿಖೆ ನಡೆಸಲಾಗ್ತಿದೆ.