ಬೆಳ್ತಂಗಡಿ: ವೇಣೂರು ಫಲ್ಗುಣಿ ತಟದಲ್ಲಿ ವಿರಾಜಮಾನನಾಗಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಫೆ. 22 ರಿಂದ ಮಾ. 1ರವರೆಗೆ ನೆರವೇರಿದ ಮಸ್ತಾಕಾಭೀಷೇಕದ ಕೊನೆಯ ದಿನ ಭರತೇಶ ಸಭಾಭವನದಲ್ಲಿ ಧಾರ್ಮಿಕ ಸಭೆಯು ನಡೆಯಿತು.
ಧಾರ್ಮಿಕ ಸಭೆಯಲ್ಲಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ’ಕರ್ನಾಟಕದ ಇತಿಹಾಸದಲ್ಲಿ ಜೈನರ ಸಿದ್ಧಾಂತ, ಪದ್ಧತಿ ಎಲ್ಲೆಡೆ ಹಂಚಿಹೋಗಿದೆ. ಭಾರತೀಯತೆಯ ಜೀವನದ ಸಂಸ್ಕೃತಿ ಪ್ರತಿಯೊಂದರಲ್ಲೂ ಹಾಸುಹೊಕ್ಕಾಗಿದೆ. ದ.ಕ. ಜಿಲ್ಲೆಯಲ್ಲಿ ನೋಡಿದಾಗ ಪ್ರಭಾವಶಾಲಿಗಳಾಗಿ ವ್ಯಾಪಾರ ಮತ್ತು ವ್ಯವಹಾರ ಕೇಂದ್ರಿತವಾಗಿಸಿ ಗುರು ಸ್ಥಾನ ಮತ್ತು ರಾಜರ ಸ್ಥಾನದಲ್ಲಿ ಸಮಾಜವನ್ನು ಬೆಳೆಸಿದ್ದಾರೆ. ಒಟ್ಟಾರೆ ಈ ನಾಡಿಗೆ ಅನೇಕ ಸತ್ ಸಂಪ್ರದಾಯಗಳು ಬರುವಲ್ಲಿ ಜೈನರು ಮತ್ತು ಅವರ ಸಂಪ್ರದಾಯದ ಐತಿಹಾಸಿಕ ಕೊಡುಗೆಯಿದೆ,’ ಎಂದು ಬಣ್ಣಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಎಸ್ .ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಹಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರಕುಮಾರ್, ಸಮಿತಿ ಕೋಶಾಧಿಕಾರಿ ಜಯರಾಜ ಕಂಬಳಿ ಉಪಸ್ಥಿತರಿದ್ದರು.