ಬೆಳ್ತಂಗಡಿ : ಮುಂಡಾಜೆ ಗ್ರಾಮದ ಸೋಮಂತ್ತಡ್ಕ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸಂಗಮ್ ಹೋಟೆಲಿನಲ್ಲಿ ಊರು ,ಹೆಸರು ತಿಳಿಯದ ಮಾನಸಿಕ ಅಸ್ವಸ್ಥ ಕಳೆದ ಮೂರು ವರ್ಷಗಳಿಂದ ಆಶ್ರಯ ಪಡೆದಿದ್ದ. ಆತನ ಮನೆಯವರಾಗಿ ಸ್ಥಳೀಯ ತಂಡ ಹುಡುಕಾಟ ನಡೆಸುವ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವಿಶೇಷ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಹೋಟೆಲ್ ಗೆ ಆಗಮಿಸಿ ಮಾಹಿತಿ ಪಡೆದು ಮನೆಯನ್ನು ಪತ್ತೆ ಹಚ್ಚಲು ಧರ್ಮಸ್ಥಳ ಪೊಲೀಸರು ಸಹಕರಿಸಿದ್ದರು.
ಇದೀಗ ಒಂದು ವಾರದ ಪರಿಶ್ರಮದಿಂದ ಜಾರ್ಖಂಡ್ ನಲ್ಲಿ ಯುವಕನ ಕುಟುಂಬ ಪತ್ತೆ ಹಚ್ಚಲಾಗಿದೆ.ಇದು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿಯ ಫಲಶೃತಿ.
ಈತ ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಗ್ಭೂಮ್ ನ ಹಟಗಮ್ಹರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ಬು ಸಿಂಝು(35) ಅನ್ನೋದು ಗೊತ್ತಾಗಿದೆ. ಈತ ಕಳೆದ ಐದು ವರ್ಷಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಹೇಗೆ ಜಾರ್ಖಂಡ್ ನಿಂದ ಕರ್ನಾಟಕಕ್ಕೆ ಬಂದ ಅನ್ನೋದು ಮಾತ್ರ ನಿಗೂಢವಾಗಿದೆ. ಈತನ ಸಮಸ್ಯೆಗೆ ಮಂಗಳೂರು ಮನೋ ವೈದ್ಯರಾದ ಡಾ.ಕಿರಣ್ ಕುಮಾರ್ ಮೆಡಿಸಿನ್ ನೀಡಿದ್ದು ಶ್ರೀಘ್ರದಲ್ಲಿ ಗುಣಮುಖನಾಗಲಿದ್ದಾನೆ ಎಂದಿದ್ದಾರೆ.
ಸಂಗಮ್ ಹೋಟೆಲ್ ಮಾಲೀಕ ಅಬ್ದುಲ್ ಲತೀಫ್ ಎಂಬವರಿಗೆ ಕಳೆದ ಮೂರು ವರ್ಷದ ಹಿಂದೆ ಸೋಮಂತ್ತಡ್ಕ ದಲ್ಲಿ ಪ್ರತಿದಿನ ತಿರುಗಾಡುತ್ತಿದ್ದವನನ್ನು ಗಮನಿಸಿದ ಬಸ್ ಚಾಲಕ ನಾರಾಯಣ ಪೂಜಾರಿ ಮಾಹಿತಿ ಮಾಡಿದ್ದರು. ಅದರಂತೆ ಅಬ್ದುಲ್ ಲತೀಫ್ ವ್ಯಕ್ತಿಯ ಬಳಿಗೆ ಬಂದು ವಿಚಾರಿಸಿದಾಗ ಯಾವುದೇ ರೀತಿಯ ಸರಿಯಾದ ಮಾಹಿತಿ ಆತ ನೀಡಿರಲಿಲ್ಲ. ಮಾತು ಸ್ಪಷ್ಟವಾಗಿರಲಿಲ್ಲ. ಅವನನ್ನು ಹೊಟೇಲ್ ಕರೆದುಕೊಂಡು ಬಂದು ರೂಂ ವ್ಯವಸ್ಥೆ ಮಾಡಿ ಪ್ರತಿದಿನ ಊಟ,ತಿಂಡಿ ನೀಡಿ ನೋಡಿಕೊಳ್ಳುತ್ತಿದ್ದರು. ನಂತರ ಪ್ರತಿದಿನ ಹೊಟೇಲ್ ನಲ್ಲಿ ಕೆಲಸ ಮಾಡಲು ಆರಂಭಿಸಿದ್ದ ಇದಕ್ಕೆ ಅವರು ಆತನ ತಿಂಗಳ ಸಂಬಳವನ್ನು ಖಾತೆಯೊಂದನ್ನು ಮಾಡಿ ಅದಕ್ಕೆ ಪ್ರತಿ ತಿಂಗಳು ಹಾಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆತನ ವರ್ತನೆಗಳಲ್ಲಿ ಬದಲಾವಣೆ ಕಂಡು ಬಂದ ಕಾರಣ ಹೊಟೇಲ್ ಮಾಲೀಕ ಅಬ್ದುಲ್ ಲತೀಫ್ ಸ್ಥಳೀಯ ಸಮಾಜ ಸೇವಕ ಅಬ್ದುಲ್ ಅಜೀಜ್ ಅವರ ತಂಡದ ಸದಸ್ಯರಿಗೆ ಮಾಹಿತಿ ನೀಡಿ ಮರಳಿ ಕಳುಹಿಸಲು ಮಾಹಿತಿ ನೀಡಿದ್ದರು.
ಮಹಾಎಕ್ಸ್ ಪ್ರೆಸ್ ವಿಶೇಷ ವರದಿ:ಮಾನಸಿಕ ಅಸ್ವಸ್ಥನ ಬಗ್ಗೆ ಮುಂಡಾಜೆ ನಿವಾಸಿ ಅಬ್ದುಲ್ ಅಜೀಜ್ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ತಂಡಕ್ಕೆ ಮಾಹಿತಿ ನೀಡಿದ್ದರು ಅದರಂತೆ ನಮ್ಮ ತಂಡ ಹೊಟೇಲಿಗೆ ತೆರಳಿ ಆತನ ಬಗ್ಗೆ ಫೆ.17 ರಂದು “ರಾಜ್ಯವನ್ನೇ ದಾಟಿ ಬಂದ ಮಾನಸಿಕ ಅಸ್ವಸ್ಥ , ಮೂರು ವರ್ಷಗಳಿಂದ ಹೊಟೇಲಿನಲ್ಲಿ ಆಶ್ರಯ, ಮನೆಯವರನ್ನು ಸಂಪರ್ಕಿಸಲು ಶ್ರಮ ಪಡುತ್ತಿರುವ ಸ್ಥಳೀಯ ತಂಡ” ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿಯನ್ನು ಪ್ರಸಾರ ಮಾಡಿತ್ತು.
ಸುಲ್ಬು ಸಿಂಝನನ್ನು ಭೇಟಿ ಮಾಡಿದ ಧರ್ಮಸ್ಥಳ ಪೊಲೀಸರು ಮಹಾ ಎಕ್ಸ್ಪ್ರೆಸ್ ವರದಿ ಪ್ರಸಾರವಾದ ಬೆನ್ನಲ್ಲೇ ಮಾಹಿತಿ ಪಡೆದ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ಮತ್ತು ತಂಡ ಸಂಗಮ್ ಹೊಟೇಲ್ ಗೆ ಆಗಮಿಸಿ ಆತನ ಬಳಿ ಮಾತನಾಡಿ ಮಾಹಿತಿ ಪಡೆದುಕೊಂಡರು. ನಂತರ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ರವರು ಜಾರ್ಖಂಡ್ ರಾಜ್ಯದ ಪೊಲೀಸ್ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕುಟುಂಬ ಸದಸ್ಯರ ಪತ್ತೆಗೆ ಮನವಿ ಮಾಡಿದ್ದರು. ಧರ್ಮಸ್ಥಳ ಪೊಲೀಸರು ಹಾಗೂ ಸ್ಥಳೀಯ ತಂಡ ಮತ್ತು ಕೆಲವು ವ್ಯಕ್ತಿಗಳ ಸಹಾಯದಿಂದ ಸುಲ್ಬು ಸಿಂಝ(35) ಕುಟುಂಬವನ್ನು ಪತ್ತೆ ಮಾಡಿ ಮನೆ ಮಂದಿಯೊಂದಿಗೆ ಫೋನ್ ಮೂಲಕ ಮಾತಾನಾಡಿಸಿ ಮನೆ ಸದಸ್ಯ ಎಂದು ಖಚಿತಪಡಿಸಿದ್ದಾರೆ.
ಪತ್ತೆ ಹಚ್ಚಲು ಸಹಕರಿಸಿದವರು: ಸಂಗಮ್ ಹೋಟೆಲ್ ಮಾಲೀಕ ಅಬ್ದುಲ್ ಲತೀಫ್ , ಸಮಾಜ ಸೇವಕ ಅಬ್ದುಲ್ ಅಜೀಜ್ , ಹಂಝ , ಜಬೀರ್ ,ಫಹಾಜ್ ಅಹಮ್ಮದ್, ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ , ಮಂಗಳೂರು ಸೆನ್ ಪೊಲೀಸ್ ಠಾಣೆಯ ಚಂದ್ರಶೇಖರ್, ಪ್ರತೀಕ್ ಕೋಟ್ಯಾನ್ ಬೆಳ್ತಂಗಡಿ , ನಾರಾಯಣ ಪೂಜಾರಿ , ದಾಸ್ಮಟ್ ಹನ್ಸಾ ಜಾರ್ಖಂಡ್, ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಗ್ಭೂಮ್ ನ ಹಟಗಮ್ಹರಿಯಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಾಲೇಶ್ವರ ಓರಾನ್ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದಾರೆ.