ಕಾಸರಗೋಡು: ಜಗತ್ತಿನಲ್ಲಿ ನೀವು ಎಂಥೆಂತಾ ಅದೃಷ್ಟವಂತರನ್ನು ನೋಡಿರಬಹುದು. ಆದ್ರೆ ಇಂತಹ ಅದೃಷ್ಟವಂತರನ್ಮು ನೋಡಿರಲು ಸಾಧ್ಯವೇ ಇಲ್ಲ. ಸಾಲದ ಸುಳಿಯಲ್ಲಿ ಸಿಲುಕಿ ಕಷ್ಟಪಟ್ಟು ಕಟ್ಟಿಸಿದ್ದ ಕನಸಿನ ಮನೆಯನ್ನೇ ಮಾರಲು ಹೊರಟ ವ್ಯಕ್ತಿಯ ಬದುಕಿನಲ್ಲಿ ಲಾಟರಿ ಆಪತ್ಭಾಂಧವನಾಗಿ ಬಂದಿದೆ.
ಹೌದು..ಕಾಸರಗೋಡಿನ ಮಂಜೇಶ್ವರದ ವೃತ್ತಿಯಲ್ಲಿ ಪೇಂಟರ್ ಆಗಿದ್ದ ಮೊಹಮ್ಮದ್ ಬಾವ (50) ಅವರು ಮಂಜೇಶ್ವರದಲ್ಲಿ ಹೊಸದಾಗಿ ಮನೆ ನಿರ್ಮಿಸಿದ್ದರು. ಅವರಿಗೆ 45 ಲಕ್ಷ ಸಾಲ ಇತ್ತು. ಕೊನೆಗೆ ಸಾಲ ತೀರಿಸಲು ಬೇರೆ ದಾರಿಯಿಲ್ಲದೇ ಇದೇ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದರು.
ಅದರಂತೆ ಮನೆ ಮಾರಾಟಕ್ಕೆ ಮಾತುಕತೆಯಾಗಿ ಮನೆಕೊಂಡುಕೊಂಡ ವ್ಯಕ್ತಿಯಿಂದ ಟೋಕನ್ ಅಡ್ವಾನ್ಸ್ ಪಡೆಯಲು ಮುಂದಾಗಿದ್ದರು. ಇನ್ನೇನು ಟೋಕನ್ ಅಡ್ವಾನ್ಸ್ ಪಡೆಯಬೇಕು ಅನ್ನುವಷ್ಟರಲ್ಲಿ ಅವರು ಕೊಂಡುಕೊಂಡಿದ್ದ ಲಾಟರಿಗೆ 1 ಕೋಟಿ ಬಂದಿದೆ ಅನ್ನೋ ವಿಚಾರ ಗೊತ್ತಾಗಿದೆ. ಬಳಿಕ ಅದೇ ಹಣದಿಂದ ಬಾವ ತಮ್ಮ ಸಾಲ ತೀರಿಸಿ ಮನೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಇದೀಗ ಬಾವ ಅವರ ಅದೃಷ್ಟ ನೋಡಿದ ಮಂದಿ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.