ಚಿಕ್ಕಮಗಳೂರು; ಪರಸ್ಪರ ಪ್ರೀತಿಸುತ್ತಿದ್ದ ಅಂತರ್ ಧರ್ಮೀಯ ಜೋಡಿಯೊಂದು ರಿಜಿಸ್ಟರ್ ಮ್ಯಾರೇಜ್ ಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದಾಗ ಲವ್ ಜಿಹಾದ್ ಎಂದು ಆರೋಪಿಸಿ ಹಿಂದೂ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮುಸ್ಲಿಂ ಧರ್ಮಕ್ಕೆ ಸೇರಿದ ಯುವಕ ಹಾಗೂ ಹಿಂದೂ ಧರ್ಮದ ಯುವತಿ ಮದುವೆಯ ನೋಂದಣಿಗೆಂದು ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿವಾಹ ನೋಂದಣಿಗೆಂದು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದ ಈ ಜೋಡಿಯನ್ನು ಭಜರಂಗದಳದ ನಾಲ್ವರು ಕಾರ್ಯಕರ್ತರು ತಡೆದಿದ್ದಾರೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ದಲಿತ ಸಂಘಟನೆ ಮುಖಂಡರು ಪೊಲೀಸ್ ಠಾಣೆಗೆ ಆಗಮಿಸಿದರು ಮತ್ತು ವಿವಾಹಕ್ಕೆ ಬೆಂಬಲ ನೀಡಿದ್ದಾರೆ.
ಈ ವಿಚಾರ ತಿಳಿದು ಖುದ್ದು ಪೊಲೀಸ್ ಠಾಣೆಗೆ ಬಂದ ಚಿಕ್ಕಮಗಳೂರು ಎಸ್.ಪಿ ಉಮಾ ಪ್ರಶಾಂತ್ ಯುವಕ ಯುವತಿಯನ್ನು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.ಬಳಿಕ ಜೋಡಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಭಜರಂಗದಳದ ಸಂಘಟನೆಯ ನಾಲ್ವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ನೈತಿಕ ಪೊಲೀಸ್ ಗಿರಿ ನಡೆಸಿದ ದೂರಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.