ಚಿಕ್ಕಮಗಳೂರು; ಪ್ರೀತಿಗೆ ಯಾವುದರ ಹಂಗಿಲ್ಲ ಎಂಬ ಮಾತಿದೆ. ಅದು ಎಲ್ಲಿ ಯಾವಾಗ, ಹೇಗೆ ಹುಟ್ಟಿಕೊಳ್ಳುತ್ತದೆ ಅನ್ನೋದನ್ನು ಹೇಳೋಕೆ ಸಾಧ್ಯಾನೇ ಇಲ್ಲ. ಇಂತಹ ಪ್ರೀತಿಗೆ ಚಿಕ್ಕಮಗಳೂರು ಸಾಕ್ಷಿಯಾಗಿದೆ.
ಚಿಕ್ಕಮಗಳೂರಿನಲ್ಲಿ ವಿಶೇಷ ಜೋಡಿಯೊಂದು ನಿನ್ನೆ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದೆ. ಚಿಕ್ಕಮಗಳೂರು ನಗರದ ಅಂಬೇಡ್ಕರ್ ಭವನದಲ್ಲಿ ಬೌದ್ಧ ಸಂಘಟನೆಯು ಹಮ್ಮಿಕೊಂಡಿದ್ದ ಈ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸಾವಿತ್ರಿ ಹಾಗೂ ಬ್ರಾಹ್ಮಣ ಸಮುದಾಯದ ಸಚಿನ್ ಜಾತಿಯ ಎಲ್ಲೆ ಮೀರಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.
ಅಂದ್ಹಾಗೆ ಸಾವಿತ್ರಿ ಹಾಗೂ ಸಚಿನ್ ಮಧ್ಯೆ ಪ್ರೀತಿ ಮೂಡಿದ್ದು ಎಟಿಎಂನಲ್ಲಿ. ಒಮ್ಮೆ ಸಾವಿತ್ರಿ ಎಟಿಎಂ ಒಂದಕ್ಕೆ ಹೋಗಿದ್ದರು. ಈ ವೇಳೆ ಎಟಿಎಂ ಮಷಿನ್ ನಿಂದ ಹಣ ತೆಗೆಯಲುಗಿ ಪರದಾಡುತ್ತಿದ್ದರು. ಆ ಸಮಯದಲ್ಲಿ ಸಚಿನ್ ಅವರು ಮಾನವೀಯತೆಯ ದೃಷ್ಟಿಯಿಂದ ಸಾವಿತ್ರಿಗೆ ಸಹಾಯ ಮಾಡಿದರು. ಈ ಒಂದು ಸಣ್ಣ ಭೇಟಿ ಪರಿಚಯವಾಗಿ ಬದಲಾಗಿ, ನಂತರ ಪರಸ್ಪರ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಂಡ ಈ ಜೋಡಿ ಪ್ರೀತಿಯ ಬಂಧನಕ್ಕೆ ಒಳಗಾದರು. ಬಳಿಕ ಮದ್ವೆಯ ನಿರ್ಧಾರಕ್ಕೆ ಬಂದರು. ಸಚಿನ್ ಮತ್ತು ಸಾವಿತ್ರಿ ತಮ್ಮ ಪ್ರೀತಿಯನ್ನು ಪೋಷಕರ ಮುಂದೆ ಮುಕ್ತವಾಗಿ ಹಂಚಿಕೊಂಡಿದ್ದರು. ಸಚಿನ್ ಅವರ ಕುಟುಂಬದವರು ಯಾವುದೇ ಜಾತಿ ಭೇದ ಮಾಡದೆ ಈ ಸಂಬಂಧಕ್ಕೆ ಸಮ್ಮತಿ ನೀಡಿದ್ದು ವಿಶೇಷವಾಗಿತ್ತು. ಎರಡೂ ಕುಟುಂಬಗಳ ಹಿರಿಯರು ಒಮ್ಮತದಿಂದ ಈ ಮದುವೆಗೆ ಹಸಿರು ನಿಶಾನೆ ತೋರಿಸಿದರು. ಅದರಂತೆ ಬೌದ್ಧ ಸಂಘಟನೆ ಆಯೋಜಿಸಿದ್ದ ಈ ಸಾಮೂಹಿಕ ವಿವಾಹ ವೇದಿಕೆಯಲ್ಲಿ, ಇತರ ಒಂಬತ್ತು ಜೋಡಿಗಳ ಜೊತೆಗೆ ಈ ಜೋಡಿಯೂ ಸತಿ-ಪತಿಯಾದರು.
ರೆ ಜಾತಿ-ಧರ್ಮದ ಕಟ್ಟುಪಾಡುಗಳಿಗಿಂತ ಮನುಷ್ಯತ್ವವೇ ದೊಡ್ಡದು ಎಂಬುದನ್ನು ಈ ಜೋಡಿ ಸಾಬೀತುಪಡಿಸಿದೆ. ಎಟಿಎಂನಲ್ಲಿ ಶುರುವಾದ ಇವರ ಪುಟ್ಟ ಪರಿಚಯ ಇಂದು ನೂರಾರು ಜನರಿಗೆ ಮಾದರಿಯಾದ ದಾಂಪತ್ಯಕ್ಕೆ ನಾಂದಿ ಹಾಡಿದೆ. ಪ್ರೀತಿಯ ಮುಂದೆ ಪ್ರಪಂಚದ ಬೇಲಿಗಳು ಗೌಣ ಎಂಬುದಕ್ಕೆ ಈ ಸಚಿನ್-ಸಾವಿತ್ರಿ ಮದುವೆಯೇ ಸಾಕ್ಷಿ.


