ರಾಜ್ಯದ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುವಂತೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಮತ್ತೆ ಬಲ ತುಂಬುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ. ಲಂಚ ಪ್ರಕರಣಗಳಲ್ಲಿ ಕ್ರಿಮಿನಲ್ ತನಿಖೆಗೆ ಅವಕಾಶ ಒಳಗೊಂಡಂತೆ ಲೋಕಾಯುಕ್ತ ವ್ಯವಸ್ಥೆಯ ಈ ಮುಂಚಿನ ಅಧಿಕಾರ ಪುನರ್ ಪ್ರತಿಷ್ಠಾಪನೆಗೆ ನಿರ್ಧರಿಸಿದೆ. ಆಗಸ್ಟ್ನಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆ ತಿದ್ದುಪಡಿ ವಿಧೇಯಕ ಮಂಡನೆಗೆ ಪಕ್ಷದ ಸೂಚನೆ ಆಧರಿಸಿ ಸರಕಾರ ಸಿದ್ಧತೆ ನಡೆಸಿದೆ.
40 ಪರ್ಸೆಂಟ್ ಕಮಿಷನ್ ಆರೋಪದಿಂದ ಸಮಾಜದ ಕೆಲ ವರ್ಗದಲ್ಲಿ ಮೂಡಿರುವ ಅಸಮಾಧಾನವು ಪರ್ಯಾಯ ಆಯ್ಕೆಯ ಸಾಧ್ಯತೆಗೆ ಪ್ರೇರಣೆಯಾಗಬಾರದು ಎಂಬ ಲೆಕ್ಕಾಚಾರ ಸರಕಾರದ ಈ ಮಹತ್ವದ ಹೆಜ್ಜೆಗೆ ಕಾರಣ. ದಿಲ್ಲಿ, ಪಂಜಾಬ್ನಲ್ಲಿನ ಆಪ್ ಸರಕಾರದ ಸ್ವಚ್ಛ ಆಡಳಿತದ ಮಾದರಿಯತ್ತ ಜನರ ನಿರೀಕ್ಷೆ ಹೊರಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷವೇ ಸರಕಾರದ ಕಿವಿ ಹಿಂಡಿ. ಲೋಕಾ ಮಾರ್ಗ ತೋರಿಸಿದೆ ಎನ್ನಲಾಗಿದೆ. ಸಿಎಂ, ಸಚಿವರು, ಶಾಸಕರ ವಿರುದ್ಧದ ಪ್ರಕರಣಗಳ ತನಿಖಾಧಿಕಾರ ಒಳಗೊಂಡು ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಸಾರ್ವಜನಿಕರ ಧ್ವನಿಯಾಗಿ ಮತ್ತೆ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವುದು ಸರಕಾರದ ಉದ್ದೇಶವಾಗಿದೆ.
ಸರಕಾರಿ ನೌಕರರ ದೂರುಗಳ ತನಿಖೆಗೆ ಮಾತ್ರ ಸೀಮಿತವಾಗಿ ಸದ್ಯ ‘ಜೀವಂತಿಕೆ’ ಉಳಿಸಿಕೊಂಡಿರುವ ಲೋಕಾಯುಕ್ತ ಸಂಸ್ಥೆಗೆ ಗತ ವೈಭವವನ್ನು ತಂದುಕೊಡಲು ಸರಕಾರ ಬಯಸಿದ್ದು, 1984ರ ಮೂಲ ಕಾಯಿದೆಯ ಆಶಯದಂತೆ ತಿದ್ದುಪಡಿ ವಿಧೇಯಕದ ಕರಡು ಸಿದ್ಧಪಡಿಸಲು ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಮೂಲಕ ಹಿಂದಿನ ಕಾಂಗ್ರೆಸ್ ಸರಕಾರ ದುರುದ್ದೇಶದಿಂದ ಲೋಕಾಯುಕ್ತವನ್ನು ದುರ್ಬಲಗೊಳಿಸಿತ್ತು ಎಂಬುದನ್ನು ಜನರ ಮುಂದಿಡುವುದು ಹಾಗೂ ಸಿದ್ದರಾಮಯ್ಯ ವಿರುದ್ಧ ಅವರ ಆಡಳಿತಾವಧಿಯಲ್ಲಿ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಮರು ಜೀವ ನೀಡುವ ಪ್ರಸ್ತಾಪವೂ ಇದೆ. 2014ರ ಲೋಕಸಭಾ ಚುನಾವಣೆಯೊಂದಿಗೆ ತಳಕು ಹಾಕಿಕೊಂಡಿದ್ದ ಅರ್ಕಾವತಿ ರೀಡೂ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತರುವುದು ಆಡಳಿತಾರೂಢ ಬಿಜೆಪಿಯ ತಂತ್ರವಾಗಿದೆ.