ಮಂಗಳೂರು_ಒಂದು ಇಡೀ ಊರಿನ ಸಮಸ್ಯೆಯನ್ನು ಸ್ಥಳೀಯಾಡಳಿತ, ಸರ್ಕಾರ ಬಗೆಹರಿಸದೇ ಇದ್ದಾಗ ಪ್ರಧಾನಿಗೆ ಪತ್ರ ಬರೆದು ಬಗೆಹರಿದ ಎಷ್ಟೋ ಉದಾಹರಣೆ ನೋಡಿದ್ದೇವೆ. ಆದ್ರೆ ಇಲ್ಲೊಂದು ಊರಿನ ಬೇಡಿಕೆಯನ್ನು ಪ್ರಧಾನಿ ಮೋದಿಯೇ ಈಡೇರಿಸುವಂತೆ ಸೂಚಿಸಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಇನ್ನು ಅಧಿಕಾರಿಗಳನ್ನು ಕಾದರೇ ಪ್ರಯೋಜನವಿಲ್ಲ ಅಂತಾ ಊರ ಜನರೇ ಸಮಸ್ಯೆಗೊಂದು ಪರಿಹಾರ ಕಂಡುಕೊಂಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಊರು. ಮಳೆಗಾಲ ಬಂತು ಅಂದ್ರೆ ಇಲ್ಲಿನ ಜನ ಪಡಬಾರದ ಕಷ್ಟ ಪಡುತ್ತಿದ್ದರು. ತಮ್ಮೂರಿನ ಹೊಳೆಯನ್ನು ದಾಟಿ ಇವರು ಪಟ್ಟಣಕ್ಕೆ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡೆ ಹೋಗಬೇಕಿತ್ತು. ಹೀಗಾಗಿ ತಮ್ಮೂರಿನ ಹೊಳಗೆ ಶಾಶ್ವತ ಸೇತುವೆ ಬೇಕೆಂದು ಶಾಸಕ-ಸಚಿವರುಗಳಿಗೆ ಮನವಿ ಸಲ್ಲಿಸಿದ್ರು. ಆದ್ರೆ ಇದು ಪ್ರಯೋಜನಕಾರಿಯಾಗದೇ ನೇರ ಪ್ರಧಾನಿಗೆ ಮನವಿ ಮಾಡಿದ್ದರು. ಸಂಕಷ್ಟದ ವಿಡಿಯೋ ಸಿಡಿ ಕಳುಹಿಸಿ ಸೇತುವೆಗೆ ಮನವಿ ಮಾಡಿದ್ದರಿಂದ ಪ್ರಧಾನಿ ಕಾರ್ಯಾಲಯದಿಂದ ಸಮಸ್ಯೆ ಬಗೆಹರಿಸುವಂತೆ ದ.ಕ ಜಿಲ್ಲಾ ಪಂಚಾಯತ್ಗೆ ಸೂಚನೆ ಬಂದಿತ್ತು. ಆದ್ರೆ ಪ್ರಧಾನಿಯೇ ಸೂಚಿಸಿದರೂ ಇಚ್ಛಾ ಶಕ್ತಿಯನ್ನು ಅಧಿಕಾರಿಗಳು ಮೆರೆದಿಲ್ಲ. ಹೀಗಾಗಿ ಅಧಿಕಾರಿಗಳನ್ನು ಇನ್ನು ಕಾದರೆ ಪ್ರಯೋಜನವಿಲ್ಲ ಅಂತಾ ಊರಿನ ಜನರೇ ಸೇತುವೆ ನಿರ್ಮಿಸಿದ್ದಾರೆ.
ಸಚಿವ ಎಸ್ ಅಂಗಾರ ಪ್ರತಿನಿಧಿಸುವ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಊರಿನ ಮಂದಿ ನೂರಾರು ಬಾರಿ ಮನವಿ ಮಾಡಿದರೂ ಯಾರು ಗಣನೆಗೆ ತೆಗೆದುಕೊಳ್ಳಿಲ್ಲ. ಹೀಗಾಗಿ ವ್ಯವಸ್ಥೆಯ ಬಗ್ಗೆ ಬೇಸತ್ತು ಗ್ರಾಮಸ್ಥರೇ ತಮ್ಮ ಸ್ವಂತ ಖರ್ಚಿನಲ್ಲಿ ಸಮಸ್ಯೆ ಬಗೆಹರಿಸಿದ್ದಾರೆ. ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಳೆಗೆ ತಾತ್ಕಾಲಿಕ ಕಬ್ಬಿಣದ ಸೇತುವೆ ತಯಾರಿಸಿದ್ದಾರೆ. ಈ ಮೂಲಕ ಹಲವು ದಶಕಗಳಿಂದ ಎದುರಿಸುತ್ತಿದ್ದ ತೀವ್ರ ಸಮಸ್ಯೆಗೆ ಮುಕ್ತಿ ಸಿಕ್ಕಿದಂತಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಹೊಳೆಯ ಇನ್ನೊಂದು ಭಾಗದಲ್ಲಿರುವ ಶಾಲೆ-ಅಂಗನವಾಡಿ ಕೇಂದ್ರಕ್ಕೆ ಪೋಷಕರು ಹೊಳೆಯಲ್ಲೇ ಮಕ್ಕಳನ್ನು ಹಿಡಿದು ಶಾಲೆಗೆ ತಲುಪಿಸುತ್ತಿದ್ದರು. ಸದ್ಯ ಇದೀಗ ಸೇತುವೆ ಆಗಿರುವುದರಿಂದ ಈ ಬಾರಿಯ ಮಳೆಗಾಲದಲ್ಲಿ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಒಟ್ಟಿನಲ್ಲಿ ಊರ ಮಂದಿಯ ಒಗ್ಗಟ್ಟಿನ ಹೋರಾಟ ನಿಜಕ್ಕೂ ಮೆಚ್ಚುವಂತದ್ದು.