ಬೆಂಗಳೂರು: ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಶಾಸಕ, ಮಾಜಿ ಸಚಿವ ಎಚ್.ಡಿ.ರೇವಣ್ಣ
ಜಾಮೀನು ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ.
ಆರೋಪಿ ವಿಚಾರಣೆಗೆ ಪೊಲೀಸ್ ಕಸ್ಟಡಿಯಲ್ಲಿರುವಾಗ ಜಾಮೀನು ಅರ್ಜಿಯ ವಿಚಾರಣೆ ಮಾಡಬಹುದೇ? ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸುವಂತೆ ಎಸ್ಐಟಿ ಗೆ ನ್ಯಾಯಾಲಯ ನೋಟೀಸ್ ಜಾರಿ ಮಾಡಿದೆ. ಎಚ್.ಡಿ ರೇವಣ್ಣ ಪರ, ಹೈಕೋರ್ಟ್ ನ ಹಿರಿಯ ವಕೀಲರಾದ ಸಿ.ವಿ. ನಾಗೇಶ್ ವಾದ ಮಂಡಿಸಿದ್ದು ,ಈ ಕೇಸ್ನಲ್ಲಿ ತಮ್ಮ ಕಕ್ಷಿದಾದರನ್ನು ಸಿಲುಕಿಸಲಾಗಿದೆ ಎಂದು ಹೇಳಿ, ಅವರಿಗೆ ಜಾಮೀನು ನೀಡಬೇಕು ಅಂತ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಆದರೆ ಇದಕ್ಕೆ ಮಧ್ಯಪ್ರವೇಶಿದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್, ಆರೋಪಿ ಪೊಲೀಸ್ ಕಸ್ಟಡಿಯಲ್ಲಿರುವಾಗ ಜಾಮೀನು ಅರ್ಜಿ ವಿಚಾರಣೆ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ .
ಅಲ್ಲದೆ ಆರೋಪಿಗೆ ಜಾಮೀನು ನೀಡಿದರೆ ಪೊಲೀಸ್ ಕಸ್ಟಡಿಯನ್ನು ಹೇಗೆ ಮುಂದುವರಿಸಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.ಇದಕ್ಕೆ ವಾದ ಮಂಡಿಸಿದ ಸಿ.ವಿ. ನಾಗೇಶ್, ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೂ ಜಾಮೀನು ನೀಡಬಹುದು ಎಂದು ಕಾನೂನಿನ ಅಂಶಗಳು ಹಾಗು ಸುಪ್ರೀಂ ಕೋರ್ಟ್ ನ ಕೆಲವು ತೀರ್ಪಿನ ನಿದರ್ಶನಗಳನ್ನ ನ್ಯಾಯಾಲಯದ ಗಮನಕ್ಕೆತಂದಿದ್ದಾರೆ. ಆದರೆ ಇದಕ್ಕೆ ಎಸ್ಐಟಿ ಆಕ್ಷೇಪ ವ್ಯಕ್ತಪಡಿಸಿತು. ಹೀಗಾಗಿ ರೇವಣ್ಣ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆಯಾಗಿದೆ.