ತುಮಕೂರು. ಸಿಎಂ ಸ್ಥಾನಕ್ಕೆ ದೆಹಲಿಯಿಂದ 2500 ಕೋಟಿ ಕೇಳಿದ್ದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಾವ ಭಾವನೆಯಿಂದ ಹೇಳಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ತುಮಕೂರಿನಲ್ಲಿ ಇಂದು ಮಾತನಾಡಿದ ಕಟೀಲ್, ಶಿಸ್ತು ಸಮಿತಿಯಿಂದ ಅವರ ವಿವರಣೆ ಕೇಳುತ್ತೇವೆ, ಇಲ್ಲಿಯ ಮಾಹಿತಿಗಳನ್ನು ಕೇಂದ್ರದ ಶಿಸ್ತು ಸಮಿತಿಗೆ ನಾವು ಕಳಿಸಿದ್ದೇವೆ. ಕೇಂದ್ರ ಶಿಸ್ತು ಸಮಿತಿ ಅವರಿಂದ ವಿವರಣೆ ಕೇಳುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ದೊಡ್ಡವರು ಸಣ್ಣವರು ಪ್ರಶ್ನೆ ಇಲ್ಲ. ನಾಯಕತ್ವ ಎನ್ನುವಂತದ್ದು ಕಾರ್ಯಕರ್ತರ ಆಧಾರದ ಮೇಲೆ ನಿರ್ಮಾಣ ಆಗುತ್ತದೆ. ಈ ಹಿಂದೆ ಎರಡು ಬಾರಿ ಅವರಿಗೆ ನೋಟಿಸ್ ಕೊಡಲಾಗಿತ್ತು, ಅದಕ್ಕೆ ಅವರು ಉತ್ತರಿಸಿದ್ದಾರೆ.
ಹಿಂದೆ ಎರಡು ಬಾರಿಯೂ ಅವರದ್ದೇ ಆದ ಕಾರಣ ಕೊಟ್ಟಿದ್ದರು. ಅವರು ಒಟ್ಟು ರಾಜಕೀಯದ ವ್ಯವಸ್ಥೆ ಬಗ್ಗೆ ಹೇಳಿದ್ದಾರೆ, ಅದು ಅವರ ಭಾವನೆ ಎಂದು ತುಮಕೂರಿನಲ್ಲಿ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.