ಬಂಟ್ವಾಳ: ವಕೀಲರ ಸಂಘ (ರಿ ) ಬಂಟ್ವಾಳ ಇದರ ಆಶ್ರಯದಲ್ಲಿ ವಕೀಲರ ದಿನಾಚರಣೆಯ ಪ್ರಯುಕ್ತ ಕಾನೂನು ಕಾರ್ಯಗಾರವನ್ನು ಇಂದು ವಕೀಲರ ಸಂಘ (ರಿ ) ಬಂಟ್ವಾಳದಲ್ಲಿ ಹಮ್ಮಿಕೊಳ್ಳಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ರಾದ ಶ್ರೀ ಬಾಲ ಗೋಪಾಲಕೃಷ್ಣ ಅವರು ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘ (ರಿ) ಬಂಟ್ವಾಳದ ಅಧ್ಯಕ್ಷರಾದ ಬಿ. ಗಣೇಶಾನಂದ ಸೋಮಯಾಜಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರಾದ ಶ್ರೀಮತಿ ರಮ್ಯಾ ಹೆಚ್. ಆರ್, ಶ್ರೀಮತಿ ಶಿಲ್ಪಾ ಜಿ ತಿಮ್ಮಾಪುರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಕೀಲರ ಕಚೇರಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ಕಚೇರಿ ಸಿಬ್ಬಂದಿಗಳಾದ ಶ್ರೀ ಪ್ರಭಾಕರ ಆಚಾರ್, ರವೀಂದ್ರ ಉಳ್ಳಾಲ್, ಜಯರಾಮ್ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು.
ಕಾನೂನು ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವಕೀಲರಾದ ಎಂ ಅಶ್ವಿನಿ ಕುಮಾರ್ ರೈ ಅವರು ಕಮರ್ಷಿಯಲ್ ಕಾನೂನು ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ವಕೀಲರಾದ ರವೀಂದ್ರ ಕುಕ್ಕಾಜೆ ಸ್ವಾಗತಿಸಿದರು. ಕುಮಾರಿ ರಾಧಿಕಾ ಧನ್ಯವಾದ ಸಲ್ಲಿಸಿದರು. ಕಾರ್ಯ ಕ್ರಮವನ್ನು ವಕೀಲರಾದ ಗಿರೀಶ್ ಮುಳಿಯಾಲ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಕಿರಿಯ ವಕೀಲ ಮಿತ್ರರು ಭಾಗವಹಿಸಿದರು.





